ಬೆಂಗಳೂರು: ಕೊಳದಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ (80) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ಆಗಮಿಕ ಮತ್ತು ಅರ್ಚಕರ ಸಂಘದ ಗೌರವ ಅಧ್ಯಕ್ಷ, ಅಖಿಲ ಕರ್ನಾಟಕ ಬೇಡ ಜಂಗಮ ಸಂಸ್ಥೆಯ ಅಧ್ಯಕ್ಷ, ಅಖಿಲ ಭಾರತ ಸಂಸ್ಕೃತ ವಿದ್ಯಾಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾಗಿದ್ದ ಶ್ರೀಗಳು, ಕೊಳದ ಮಠದ ಮಹಾಸಂಸ್ಥಾನದ ಮೂಲಕ ವಿವಿಧ ಧಾರ್ಮಿಕ, ಸಾಮಾ ಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದ್ದರು.
ಲಿಂಗಾಯತ ವಿರಕ್ತ ಪರಂಪರೆ ಯನ್ನು ಹೊಂದಿದ ಕೊಳದ ಮಠಕ್ಕೆ ಶಾಂತವೀರ ಸ್ವಾಮೀಜಿ ಚಿತ್ರದುರ್ಗದ ಮುರುಘಾಮಠದ ಮುರುಘರಾಜೇಂದ್ರ ಜಗದ್ಗುರುಗಳಿಂದ ಪಟ್ಟಾಧಿಕಾರ ಪಡೆದಿದ್ದರು.
60 ವರ್ಷಗಳಿಂದ ಪೀಠಾಧ್ಯಕ್ಷರಾಗಿದ್ದ ಅವರು,‘ಅಲ್ಲಮ ಪ್ರಶಸ್ತಿ’ ಸ್ಥಾಪಿಸಿದ ಹೆಗ್ಗಳಿಕೆ ಹೊಂದಿದ್ದರು. ಆ ಮೂಲಕ ಬಸವಣ್ಣನ ತತ್ವಗಳ ಅನುಷ್ಠಾನಕ್ಕಾಗಿ ದುಡಿದರಲ್ಲದೆ, ಸಂಸ್ಕೃತ, ಹಿಂದಿ ಮತ್ತು ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದರು. ಶಾಂತವೀರ ಸ್ವಾಮೀಜಿ ಮಠದಲ್ಲಿ ಹಿಂದಿ ಭಾಷಾ ಸಮ್ಮೇಳನಗಳನ್ನೂ ನಡೆಸುತ್ತಿದ್ದರು. ವೇದ ಮತ್ತು ಆಗಮ ಶಾಸ್ತ್ರ ಗಳಲ್ಲೂ ಪಾಂಡಿತ್ಯ ಪಡೆದಿದ್ದ ಅವರು ಧಾರ್ಮಿಕ ಚಟುವಟಿಕೆಗಳ ಹೊರತಾಗಿ ಸಾಮಾಜಿಕ, ರಾಜಕೀಯ ಬೆಳವಣಿ ಗೆಗಳಲ್ಲಿ ಆಗಾಗ್ಗೆ ಮುನ್ನೆಲೆಗೂ ಬಂದದ್ದುಂಟು. ಜಾತ್ಯತೀತ ಮಠ ಎಂದೇ ಕೊಳದ ಮಠ ಪ್ರಸಿದ್ಧಿ ಪಡೆದಿದೆ.
ಮಠದ ಆವರಣದಲ್ಲಿ ಶನಿವಾರ ರಾತ್ರಿ ಸ್ವಾಮೀಜಿ ಅವರ ಅಂತ್ಯಸಂಸ್ಕಾರ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.