ಮುಂಬೈ: ಲೋಕಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ತಮ್ಮ ಪಕ್ಷಕ್ಕೆ ನೀಡಬೇಕು ಎಂದು ಬಿಜೆಪಿಯ ಪ್ರಮುಖ ಮೈತ್ರಿಪಕ್ಷ ಶಿವಸೇನಾ ಒತ್ತಾಯಿಸಿದೆ. ಎನ್ಡಿಎಯ ಮೈತ್ರಿ ಪಕ್ಷಗಳಲ್ಲಿ ಶಿವಸೇನಾ 18 ಸ್ಥಾನಗಳನ್ನು ಹೊಂದಿದೆ.
ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಶಿವಸೇನಾದ ಅರವಿಂದ್ ಸಾವಂತ್ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆಯ ಸಚಿವರಾಗಿದ್ದಾರೆ. ಹಿಂದಿನ ಸರ್ಕಾರದಲ್ಲಿಯೂ ಶಿವಸೇನಾಗೆ ಇದೇ ಖಾತೆಯನ್ನು ನೀಡಲಾಗಿತ್ತು. ಇದರಿಂದ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಸಂತುಷ್ಟರಾಗಿಲ್ಲ ಎನ್ನಲಾಗಿದೆ. ಆದರೆ, ಠಾಕ್ರೆ ಬಹಿರಂಗವಾಗಿ ತಮ್ಮ ಬೇಸರ ಹೊರಹಾಕಿಲ್ಲ.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತ, ‘ಡೆಪ್ಯೂಟಿ ಸ್ಪೀಕರ್ ಇರಲಿ, ಇನ್ಯಾವುದೇ ಹುದ್ದೆ ಇರಲಿ, ನಾವು ಬಹಿರಂಗ
ವಾಗಿ ಬೇಡಿಕೆ ಮಂಡಿಸುತ್ತೇವೆ. ಬೇಡಿಕೆ ಇಟ್ಟಿದ್ದೇವೆ ಎಂದರೆ ನಾವು ಬೇಸರಗೊಂಡಿದ್ದೇವೆ ಎಂದು ಅರ್ಥವಲ್ಲ. ಕೆಲವೊಂದನ್ನು ಕೇಳುವುದು ನಮ್ಮ ಹಕ್ಕು ಆಗಿರುತ್ತದೆ. ಇದನ್ನು ಬೇಸರ ಎಂದು ಪರಿಗಣಿಸಬಾರದು’ ಎಂದು ಉದ್ಧವ್ ಹೇಳಿದ್ದಾರೆ.
‘ಡೆಪ್ಯುಟಿ ಸ್ಪೀಕರ್ ಸ್ಥಾನ ನಮ್ಮ ಬೇಡಿಕೆಯಲ್ಲ. ಅದು ಸಹಜ ಕೋರಿಕೆ ಮತ್ತು ಹಕ್ಕು. ಇಲ್ಲಿ ‘ಸಹಜ’ ಎಂಬ ಪದ ಮುಖ್ಯ. ಈ ಸ್ಥಾನವನ್ನು ಖಂಡಿತವಾಗಿ ಶಿವಸೇನೆಗೆ ನೀಡಬೇಕು’ ಎಂದು ರಾಜ್ಯಸಭೆ ಸದಸ್ಯ ಮತ್ತು ಪಕ್ಷದ ವಕ್ತಾರ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.