ಬಾಗಲಕೋಟೆ:ಡಿಕೆ, ಡಿಕೆ... ಅಂತ ಕೂಗಿದ್ದಕ್ಕೆ ಹಾಗೆ ಕೂಗಬೇಡ್ರಪ್ಪಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಮಾನಿಗಳಿಗೆ ಮನವಿ ಮಾಡಿದರು.
ಬನಹಟ್ಟಿ ನಗರದಲ್ಲಿ ನೇಕಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ಬೆಂಬಲಿಗರು ಜೈಕಾರ ಕೂಗಿದರು.
ಈ ವೇಳೆ ’ಅದ್ಯಾರೋ ಡಿಕೆ ಪಾಕೆ ಅಂತೀರಾ ಅದನ್ನೆಲ್ಲಾ ಬಿಡ್ರಪ್ಪಾ.ನನ್ನ ಹಾಳು ಮಾಡೋಕೆ ನೀವು ಈ ಕೆಲಸ ಮಾಡ್ತಿರೋದು. ಈಗಲೇ ಕೂಗಿ ನನ್ನ ಹಾಳು ಮಾಡಬೇಡಿ.ನಿಮ್ಮ ಅಭಿಮಾನ ಏನಾದ್ರೂ ಇದ್ದರೆ ಮುಂದೆ ತೋರಿಸುವಿರಂತೆ. ಮುಂದೆ ಸಂದಭ೯ ಬಂದಾಗ ನನ್ನ ಬೆಂಬಲಕ್ಕೆ ಇರಿ ಎಂದು ಮನವಿ ಮಾಡಿದರು.
ಯಾರೂ ಕೂಡ ಜೈಕಾರ ಹಾಕಬೇಡಿ, ಬೇಕಾದ್ರೆ ನಿಮಗೆ ಕೈಮುಗಿದು ಕೇಳುತ್ತೇನೆ, ಶಾಂತವಾಗಿರಿ...ಕೆಳಗಡೆ ಕುಳಿತುಕೋ ಅಂದ್ರೂ ಕೂರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಅದ್ಧೂರಿ ಸ್ವಾಗತ
ಬನಹಟ್ಟಿಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆ ತರಲಾಯಿತು. ಈ ವೇಳೆ ಸೇಬು ಹಣ್ಣುಗಳಿಂದ ಮಾಡಿದ ಬೃಹತ್ ಹಾರವನ್ನು ಕ್ರೇನ್ ಮೂಲಕ ಹಾಕಿ, ಪಟಾಕಿ ಸಿಡಿಸಿ, ಹೂವು ಎರಚಿ ಬೆಂಬಲಿಗರು ಅಭಿಮಾನ ಮೆರೆದರು. ಜಮಖಂಡಿ ಶಾಸಕಆನಂದ ನ್ಯಾಮಗೌಡ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.