ಶೋಭಾ ಕರಂದ್ಲಾಜೆ
ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ನೇಮಕವಾಗಿ ಮೂರು ತಿಂಗಳಾದರೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈವರೆಗೂ ‘ನೂತನ ಅಧ್ಯಕ್ಷ’ರಿಗೆ ಅಭಿನಂದನೆ ಸಲ್ಲಿಸದೇ ಇರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಶುಭಾಶಯ ಕೋರುವ ಮಾತಿರಲಿ, ಕನಿಷ್ಠ ಪಕ್ಷ ‘ಎಕ್ಸ್’ ಮೂಲಕವೂ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಪಕ್ಷದ ಕಚೇರಿಗೂ ಬಂದಿಲ್ಲ. ವಿಜಯೇಂದ್ರ ಬಗ್ಗೆ ತಕರಾರು ಹೊಂದಿರುವ ಕೆಲವು ನಾಯಕರು ಅಸಮಾಧಾನ ಹೊರಹಾಕಿದ್ದರು. ವರಿಷ್ಠರ ಮಧ್ಯ ಪ್ರವೇಶದ ಬಳಿಕ ಈಗ ಅವರೆಲ್ಲ ಸುಮ್ಮನಾಗಿದ್ದಾರೆ’ ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ಮಂಗಳೂರಿಗೆ ವಿಜಯೇಂದ್ರ ಮತ್ತು ಶೋಭಾ ಅವರು ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದರು. ಆದರೆ, ಪರಸ್ಪರ ಮಾತನಾಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ, ಇತ್ತೀಚೆಗೆ ನಡೆದ ಪಕ್ಷದ ಯಾವುದೇ ಸಭೆಗಳಿಗೂ ಶೋಭಾ ಹಾಜರಾಗಿಲ್ಲ. ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಸಿದ್ಧತೆ ಕುರಿತಾಗಿ ನಡೆಸಿದ ಸಭೆಯ ವೇಳೆಯೂ ತಮ್ಮ ಕ್ಷೇತ್ರದ ಬಗ್ಗೆ ವಿವರ ನೀಡಲು ಅವರು ಹಾಜರಾಗಲಿಲ್ಲ. ಶೋಭಾ ಅವರು ಈ ಬಾರಿ ಕ್ಷೇತ್ರ ಬದಲಿಸುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸುವ ಸಂಪ್ರದಾಯದ ಪಕ್ಷದಲ್ಲಿದೆ. ಅದನ್ನು ಪಾಲಿಸುತ್ತಾರೋ ಇಲ್ಲವೋ ಕಾದು ನೋಡಬೇಕು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.