ಬೆಂಗಳೂರು: ಹತ್ತು ಅಥವಾ ಅದಕ್ಕಿಂತ ಅಧಿಕ ಸಂಖ್ಯೆಯಲ್ಲಿ ನೌಕರರನ್ನು ಒಳಗೊಂಡ ಅಂಗಡಿ ಅಥವಾ ವಾಣಿಜ್ಯ ಮಳಿಗೆ ದಿನದ 24 ಗಂಟೆಯೂ ತೆರೆದೇ ಇರಬಹುದು ಎಂಬ ಸುತ್ತೋಲೆಯನ್ನು ಕಾರ್ಮಿಕ ಇಲಾಖೆ ಹೊರಡಿಸಿದೆ.
ಸರ್ಕಾರದ ಈ ಕ್ರಮದಿಂದ ದೊಡ್ಡ ದೊಡ್ಡ ಮಳಿಗೆಗಳು, ಮಾಲ್ಗಳು, ಅಂಗಡಿಗಳು ಬಾಗಿಲು ಬಂದ್ ಮಾಡದೇ ಅಹೋರಾತ್ರಿ ವ್ಯಾಪಾರ, ವಹಿವಾಟು ನಡೆಸಬಹುದಾಗಿದೆ. ಆದರೆ ಸಣ್ಣ ಅಂಗಡಿಗಳು ಈ ಸುತ್ತೋಲೆಯಿಂದ ಕಂಗೆಟ್ಟಿದ್ದು, ತಮ್ಮ ವ್ಯಾಪಾರ ಇನ್ನಷ್ಟು ಕುಸಿಯಬಹುದು ಎಂಬ ಆತಂಕ ವ್ಯಕ್ತಪಡಿಸಿವೆ.
ಅಕ್ಟೋಬರ್ 11ರಂದು ಹೊರಡಿಸಲಾದ ಈ ಸುತ್ತೋಲೆ ಮೂರು ವರ್ಷಗಳ ಮಟ್ಟಿಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಆದರೆ ಇದು ಶೀಘ್ರ ರಾಜ್ಯಪತ್ರದ ಮೂಲಕ ಅಧಿಕೃತ ಆದೇಶವಾಗಿ ಮೂಡಿಬರಲಿದೆ. ಮೂರು ವರ್ಷಗಳ ಬಳಿಕ ಈ ನಿಯಮ ಬದಲಾಗುವ ಸೂಚನೆಯನ್ನೂ ಇದು ನೀಡಿದೆ.
ರಾಜ್ಯದಲ್ಲಿ ವ್ಯವಹಾರ ನಡೆಸುವುದನ್ನು ಸರಳಗೊಳಿಸುವ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆ ಇದು ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ.ಮಣಿವಣ್ಣನ್ ಹೇಳಿದ್ದಾರೆ.
ಶೋಷಣೆ ಆಗಬಾರದು: ದಿನದ 24 ಗಂಟೆಯೂ ತೆರೆದಿರುವ ವಾಣಿಜ್ಯ ಮಳಿಗೆಗಳು ಸಾಕಷ್ಟು ಸಂಖ್ಯೆಯಲ್ಲಿ ನೌಕರರನ್ನು ಹೊಂದಿರಬೇಕು, ಪಾಳಿಯಲ್ಲಿ ಕೆಲಸ ಮಾತ್ರವಲ್ಲದೆ, ಸರದಿಯಂತೆ ವಾರದ ರಜೆಗಳನ್ನು ಸಿಬ್ಬಂದಿಗೆ ನೀಡಬೇಕು. ನೌಕರರ ಶೋಷಣೆ ಮಾಡಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.