ADVERTISEMENT

ಯುಪಿಪಿಗೆ ಅಭ್ಯರ್ಥಿಗಳಾಗಬೇಕೆ? ಪ್ರಶ್ನೆಗಳಿಗೆ ಉತ್ತರಿಸಿ: ಉಪೇಂದ್ರ

ಲೋಕಸಭೆಗೆ ಸ್ಪರ್ಧಿಸುವುದಿಲ್ಲ: ಯುಪಿಪಿ ಸಂಸ್ಥಾಪಕ ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 10:01 IST
Last Updated 2 ಫೆಬ್ರುವರಿ 2019, 10:01 IST
   

ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೀವು ಉತ್ತಮ ಪ್ರಜಾಕೀಯ ಪಕ್ಷದಿಂದ (ಯುಪಿಪಿ) ಸ್ಪರ್ಧಿಸಬೇಕೇ? ಹಾಗಿದ್ದರೆ, ಪಕ್ಷದಿಂದ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ.

ಕ್ಷೇತ್ರದ ಜನರೊಂದಿಗೆ ಸಂಪರ್ಕ ಸಾಧಿಸಲು ಏನು ಮಾಡುವಿರಿ? ಜನರ ಅಗತ್ಯತೆ ಹಾಗೂ ನಿರೀಕ್ಷೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹೇಗೆ ಯೋಜಿಸುವಿರಿ? ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಹೇಗೆ ಪರಿಹರಿಸುವಿರಿ? ಸಂಸತ್ತಿನಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತಾಪಿಸಲು ನೀವು ಹೇಗೆ ಸಿದ್ಧತೆ ಮಾಡಿಕೊಳ್ಳುವಿರಿ? ಭ್ರಷ್ಟಾಚಾರವಿಲ್ಲದೆ ಪ್ರಾಮಾಣಿಕರಾಗಿ ಕೆಲಸ ಮಾಡುತ್ತೀರಿ ಎಂಬುದನ್ನು ಹೇಗೆ ಸಾಬೀತುಪಡಿಸುತ್ತೀರಿ ಎಂಬುದು ಸೇರಿದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅಭ್ಯರ್ಥಿಯಾಗಬೇಕಿದೆ.

ಆಕಾಂಕ್ಷಿ ಅಭ್ಯರ್ಥಿಗಳಿಗೆ ಒಂಬತ್ತು ಪ್ರಶ್ನೆಗಳನ್ನು ಕೇಳಲಾಗಿದೆ. ಅವರ ನೀಡುವ ಉತ್ತರಗಳ ಆಧಾರದ ಮೇಲೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಯುಪಿಪಿ ಸಂಸ್ಥಾಪಕ ಉಪೇಂದ್ರ ಹೇಳಿದರು.

ADVERTISEMENT

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ, ಚುನಾವಣೆ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ತಿರಸ್ಕಾರ ಹಾಗೂ ಉತ್ತಮ ಕೆಲಸ ಮಾಡಿದವರ ಪ್ರೋತ್ಸಾಹಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ಮತದಾರರಿಗೆ ಆಯ್ಕೆ ನೀಡಲಾಗುವುದು ಎಂದರು.

ನಾಯಕನಾಗಿರುವವರು ನಮ್ಮ ಪಕ್ಷಕ್ಕೆ ಬೇಕಿಲ್ಲ. ಜನರ ಸೇವೆ ಮಾಡುವ ಕಾರ್ಮಿಕರು ಬೇಕಾಗಿದ್ದಾರೆ. ಹಣವಿದ್ದವರು ಮಾತ್ರ ಚುನಾವಣೆ ಗೆಲ್ಲಬಹುದು ಎಂಬಂತಾಗಿದೆ. ಜನಸಾಮಾನ್ಯರಿಗೆ ಸ್ಪಂದಿಸುವವರೂ ಗೆಲ್ಲಬಹುದಾಗಿದೆ. ಜನರೂ ಬದಲಾವಣೆ ಬಯಸುತ್ತಿದ್ದಾರೆ. ಅವರ ಬದಲಾವಣೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

‘ಮತದಾರರು ಹಾಗೂ ಅಭ್ಯರ್ಥಿಗಳ ನಡುವೆ ಹಣ, ಆಮಿಷ ಯಾವುದೂ ಇರಬಾರದು. ವಿಚಾರಗಳ ವಿನಿಮಯ ಮಾತ್ರ ಇರಬೇಕು. ಜನಪ್ರತಿನಿಧಿಗಳ ಮನೆಗೆ ಜನರು ಹೋಗುವಂತಿರಬಾರದು. ಜನಪ್ರತಿನಿಧಿಗಳೇ ಜನರ ಬಳಿಗೆ ಬರಬೇಕು ಎಂದರು.

‘ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಮುಂದೆ ನಡೆಯುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.