ADVERTISEMENT

ಕೇಂದ್ರ, ಅದಾನಿಯಿಂದ ವಿದ್ಯುತ್ ಖರೀದಿ ನಿಲ್ಲಿಸಿ: ಸಿದ್ದರಾಮಯ್ಯ ಆಗ್ರಹ

ರಾಜ್ಯ ಸರ್ಕಾರಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 14:04 IST
Last Updated 12 ಫೆಬ್ರುವರಿ 2021, 14:04 IST
   

ಬಾಗಲಕೋಟೆ: ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಅದಾನಿ ಕಂಪೆನಿಯಿಂದ ವಿದ್ಯುತ್ ಖರೀದಿಯನ್ನು ತಕ್ಷಣವೇ ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಬಾದಾಮಿಯಲ್ಲಿ ಶುಕ್ರವಾರ ನೂತನ ವಿದ್ಯುತ್ ಉಪಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ 30,098 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಆದರೆ ನಮ್ಮ ಬೇಡಿಕೆ ಕೇವಲ 11 ಸಾವಿರ ಮೆಗಾವ್ಯಾಟ್ ಆಸುಪಾಸಿನಲ್ಲಿದೆ. ಬೇಡಿಕೆಗಿಂತ ಹೆಚ್ಚು ಉತ್ಪಾದನೆ ಇರುವ ಕಾರಣ ರಾಯಚೂರು ಶಾಖೋತ್ಪನ್ನ ಘಟಕ ಸ್ಥಗಿತಗೊಳಿಸಿದ್ದೇವೆ. ನಾವೇ ಬೇರೆಯವರಿಗೆ ವಿದ್ಯುತ್ ಕೊಡುವಷ್ಟು ಸಶಕ್ತರಾಗಿರುವ ಕಾರಣ ಕೇಂದ್ರದಿಂದ ಇಲ್ಲವೇ ಹೊರಗಿನವರಿಂದ ವಿದ್ಯುತ್ ಖರೀದಿ ಸಲ್ಲ ಎಂದು ಹೇಳಿದರು.

’ನಮ್ಮಲ್ಲಿ ಉತ್ಪಾದನೆ ಆಗುವ ಹೆಚ್ಚುವರಿ ವಿದ್ಯುತನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡಿ ಆದಾಯ ಕ್ರೋಢೀಕರಿಸಬಹುದಿತ್ತು. ಆದರೆ ಅಧಿಕಾರಿಗಳು ತಪ್ಪು ಯೋಜನೆ ಮಾಡುತ್ತಿದ್ದಾರೆ. ಅದಾನಿ ಕಂಪೆನಿಯಿಂದ 1030 ಮೆಗಾವ್ಯಾಟ್ ವಿದ್ಯುತ್ ಖರೀದಿಸುತ್ತಿದ್ದೇವೆ. ಅದನ್ನು ನಿಲ್ಲಿಸಿ ಎಂದರೆ 2024ರವರೆಗೆ ಖರೀದಿ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳುತ್ತಾರೆ‘ ಎಂದು ವ್ಯಂಗ್ಯವಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.