ADVERTISEMENT

ನನ್ನ ರಾಮ ಅಂತಃಕರಣ ಸ್ವರೂಪಿ, ಬಿಜೆಪಿಗೆ ಚುನಾವಣಾ ಸರಕು: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2023, 13:17 IST
Last Updated 30 ಮಾರ್ಚ್ 2023, 13:17 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ಮಹಾತ್ಮ ಗಾಂಧಿಯವರು ನಂಬಿದ್ದ ಮಾನವೀಯ ಗುಣಗಳ, ಮಾತೃಹೃದಯದ, ಸರ್ವವನ್ನೂ ಪ್ರೀತಿಸುವ ರಾಮನ ಅನುಯಾಯಿ ನಾನು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಹೀಗೆ ಹೇಳಲೂ ಕಾರಣವಿದೆ. ಶ್ರೀ ರಾಮ ನವಮಿಯ ಹಿನ್ನೆಲೆಯಲ್ಲಿ ಅವರು ಇಂದು ಬೆಳಗ್ಗೆ ಮಾಡಿದ್ದ ಶುಭಾಶಯದ ಟ್ವೀಟ್‌ಅನ್ನು ಬಿಜೆಪಿ ಗೇಲಿ ಮಾಡಿತ್ತು. ಅದಕ್ಕೆ, ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಶುಭ ಕೋರಿದ್ದ ಸಿದ್ದರಾಮಯ್ಯ

ADVERTISEMENT

‘ಆದರ್ಶ ಪುರುಷ ಶ್ರೀರಾಮನು ಹಾಕಿಕೊಟ್ಟ ಪ್ರೀತಿ, ಸಹಾನುಭೂತಿ, ಅಂತಃಕರಣ, ನ್ಯಾಯಪರಿಪಾಲನೆಯ ಹಾದಿಯಲ್ಲಿ ಮುನ್ನಡೆಯೋಣ. ಪಾನಕ, ಕೋಸಂಬರಿಯ ಜೊತೆ ಸ್ನೇಹ, ಸೌಹಾರ್ದತೆ ಮಿಳಿತಗೊಳ್ಳಲಿ, ಮನುಷ್ಯಪ್ರೇಮದ ಬೆಳಕು ಜಗದಗಲ ಬೆಳಗಲಿ. ನಾಡಿನ ಸಮಸ್ತ ಜನತೆಗೆ ರಾಮನವಮಿಯ ಶುಭಹಾರೈಕೆಗಳು’ ಎಂದು ಸಿದ್ದರಾಮಯ್ಯ ತಮ್ಮ ಪೋಸ್ಟರ್‌ನಲ್ಲಿ ಬರೆದಿದ್ದರು.

ವ್ಯಂಗ್ಯವಾಡಿದ್ದ ಬಿಜೆಪಿ

ಸಿದ್ದರಾಮಯ್ಯ ಅವರ ಟ್ವೀಟ್‌ ರೀಟ್ವೀಟ್‌ ಮಾಡಿಕೊಂಡಿದ್ದ ಬಿಜೆಪಿ, 'ಪ್ರಭು ರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸುವ.. ಭವ್ಯ ಮಂದಿರದ ವಿರುದ್ಧವೇ ಸಮರ ಸಾರಿದ… ರಾಮರಾಜ್ಯವನ್ನು ಟೀಕಿಸುವ… 'ಅಲ್ಪರ' ಗುಂಪಿನ ‘Poster Boy’ ಸಿದ್ದರಾಮಯ್ಯ ಅವರು ಇಂದು ‘ರಾಮಭಕ್ತನ’ ವೇಷ ತೊಟ್ಟು, ‘ಚುನಾವಣಾ ನಿಮಿತ್ತ ಬಹುಕೃತವೇಷ’ವೆಂಬ ನುಡಿಯ ಗೌರವ ಹೆಚ್ಚಿಸಿದ್ದಾರೆ‘ ಎಂದು ಕುಹಕವಾಡಿತ್ತು.

ತಿರುಗೇಟು

ಬಿಜೆಪಿಯ ಟ್ವೀಟ್‌ಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ‘ಮಹಾತ್ಮ ಗಾಂಧಿಯವರು ನಂಬಿದ್ದ ಮಾನವೀಯ ಗುಣಗಳ, ಮಾತೃಹೃದಯದ, ಸರ್ವವನ್ನೂ ಪ್ರೀತಿಸುವ ರಾಮನ ಅನುಯಾಯಿ ನಾನು. ರಾಮನ ಹೆಸರಿನಲ್ಲಿ ದ್ವೇಷಬಿತ್ತಿ, ಮನಸುಗಳನ್ನು ಒಡೆದು ಚುನಾವಣೆಯಲ್ಲಿ ಲಾಭ ಪಡೆಯುವವರು ನೀವು (ಬಿಜೆಪಿ). ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣಾ ಸರಕು. ಶ್ರೀರಾಮನೇ ನಿಮಗೆ ಸದ್ಬುದ್ಧಿ ನೀಡಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.