ಬಿ.ವೈ.ವಿಜಯೇಂದ್ರ
- ಫೇಸ್ಬುಕ್ ಚಿತ್ರ
ಬೆಂಗಳೂರು: ಅಧಿಕಾರದ ಮದದಲ್ಲಿ ತೇಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ–ನುಡಿಗಳು ವಿಪರೀತಕ್ಕೆ ಹೋಗಿವೆ. ಪೊಲೀಸ್ ಅಧಿಕಾರಿಯ ವಿರುದ್ಧ ಕೈ ಮಾಡಲು ಹೋಗಿ ಮುಖ್ಯಮಂತ್ರಿ ಸ್ಥಾನದ ಘನತೆಗೇ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ‘ಎಕ್ಸ್’ ಮಾಡಿರುವ ಅವರು, ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ರಾಷ್ಟ್ರಭಕ್ತ ಮಹಿಳೆಯರು ದಿಟ್ಟತನದಿಂದ ಘೋಷಣೆ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಇದರಿಂದ ವಿಚಲಿತರಾದ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಯ ವಿರುದ್ಧ ಆರ್ಭಟಿಸಿ, ಕೈ ಮಾಡಲು ಹೋಗಿದ್ದಾರೆ ಎಂದಿದ್ದಾರೆ.
ಕೆಲ ತಿಂಗಳ ಹಿಂದೆ ಸಭೆಯೊಂದರಲ್ಲಿ ಜಿಲ್ಲಾಧಿಕಾರಿಯೊಬ್ಬರನ್ನು ವೇದಿಕೆಯ ಮೇಲೆ ಅಪಮಾನಿಸಿ ತಮ್ಮ ಸಂಸ್ಕೃತಿ ಮತ್ತು ನಡವಳಿಕೆಯನ್ನು ಬಹಿರಂಗಗೊಳಿಸಿದ್ದರು. ಅವರ ವರ್ತನೆ ಇಂದು ನಿನ್ನೆಯದಲ್ಲ. ಸ್ವಕ್ಷೇತ್ರದಲ್ಲಿ ಮಹಿಳೆಯೊಬ್ಬರ ವಿರುದ್ಧವೂ ಇದೇ ರೀತಿ ವರ್ತಿಸಿದ್ದರು. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ
ವರು ಅನುಭವದ ಹಿರಿತನ, ನಡವಳಿಕೆಯಿಂದ ಪಕ್ವರಾಗಿರಬೇಕು. ಸಿದ್ದರಾಮಯ್ಯ ಅವರ ವಿಷಯದಲ್ಲಿ ಇದು ತಿರುಗುಮುರಗಾಗಿದೆ. ದಿನೇ ದಿನೇ ತಮ್ಮ ನಾಲಗೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಬೇಹುಗಾರಿಕೆ ವೈಫಲ್ಯವೇ?:
‘ಮುಖ್ಯ ಮಂತ್ರಿಯವರೇ ನಿಮ್ಮ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಯುತ್ತದೆ ಎಂಬ ಮಾಹಿತಿ ನಿಮ್ಮ ಗುಪ್ತಚರದಳಕ್ಕೆ ಇರಲಿಲ್ಲವೇ? ಇದು ಬೇಹುಗಾರಿಕೆ ವೈಫಲ್ಯಅಲ್ಲವೇ?’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಜಮ್ಮು–ಕಾಶ್ಮೀರದ ವಿಚಾರದಲ್ಲಿ ದೇಶದ ವಿರುದ್ಧ ಸುಳ್ಳುಗಳನ್ನು ಹೇಳುವ ಕೆಲಸ ಮಾಡುತ್ತಿದ್ದರು. ಅದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.