ಶಾಸಕ ಕಂಪ್ಲಿ ಗಣೇಶ್
ಬೆಂಗಳೂರು: ‘ಸಿದ್ದರಾಮಯ್ಯ ಅವರು ರಾಜ್ಯಕ್ಕಷ್ಟೇ ಅಲ್ಲ, ದೇಶಕ್ಕೆ ಅನಿವಾರ್ಯವಾಗಿದ್ದಾರೆ. ನಾವೆಲ್ಲ 138 ಶಾಸಕರು ಅವರ ಬೆಂಬಲಕ್ಕಿದ್ದೇವೆ’ ಎಂದು ಕಂಪ್ಲಿ ಶಾಸಕ ಕಂಪ್ಲಿ ಗಣೇಶ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ. ಇದಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯೇ ಸಾಕ್ಷಿಯಾಗಿದೆ. ಅವರು ಒಂದು ರೀತಿ ರೋಲ್ ಮಾಡೆಲ್ ಇದ್ದಂತೆ. ಅವರಿಂದಾಗಿ ನಮ್ಮ ಜಿಲ್ಲೆಯಲ್ಲಿನ (ಬಳ್ಳಾರಿ) ಐದಕ್ಕೆ ಐದು ನಾವು (ಕಾಂಗ್ರೆಸ್) ಗೆದ್ದಿದ್ದೇವೆ’ ಎಂದರು.
ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಬೇಕು ಎಂಬ ವಿಚಾರವಾಗಿ ಮಾತನಾಡಿದ ಅವರು, ‘ಹೈಕಮಾಂಡ್ ಹೇಳಿದರೆ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅವರು ಮುಂದುವರಿದರೆ ಒಳ್ಳೆಯದಲ್ಲವೇ?’ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ’ ಎಂದರು.
ಅನುದಾನದ ಬಗ್ಗೆ ಶಾಸಕರ ಅಸಮಾಧಾನ ವಿಚಾರವಾಗಿಯೂ ಮಾತನಾಡಿದ ಅವರು, ‘ತನ್ನ ಅಧಿಕಾರ ಅವಧಿಯಲ್ಲಿ ಸರ್ಕಾರ ಏನೇನು ಮಾಡಿದೆ? ಗ್ಯಾರಂಟಿ ಯೋಜನೆಗಳು ನಗರ ಭಾಗಕ್ಕೆ ಅನುಕೂಲ ಆಗದಿರಬಹುದು. ಆದರೆ, ಗ್ರಾಮೀಣ ಭಾಗಕ್ಕೆ ಹೆಚ್ಚಿನ ಅನುಕೂಲವಾಗಿದೆ. ಜನ ಸಿದ್ದರಾಮಯ್ಯ ಅವರನ್ನು ಹೊಗಳುತ್ತಿದ್ದಾರೆ’ ಎಂದರು.
‘ನನ್ನ ಕಂಪ್ಲಿ ಕ್ಷೇತ್ರದ ವಿವರ ತೆಗೆದುನೋಡಿ. ₹ 500 ಕೋಟಿ ಅನುದಾನ ನಮಗೆ ಸಿಕ್ಕಿದೆ. ₹ 150 ಕೋಟಿ ರಸ್ತೆ ಅಭಿವೃದ್ಧಿಗೆ ಸಿಕ್ಕಿದೆ. ಇತರ ಅನೇಕ ಅನುದಾನಗಳು ಸಿಕ್ಕಿವೆ. ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಹಣ ಸಿಕ್ಕಿದೆ. ನೂರಾರು ಕೋಟಿ ಹಾಸ್ಟೆಲ್ಗೆ ಕೊಟ್ಟಿದ್ದಾರೆ. ಅನುದಾನ ಕೊಡದೇ ಇದ್ದಿದ್ದರೆ ಇಷ್ಟು ಕೆಲಸ ಆಗುತ್ತಿತ್ತೇ? ಎಂದು ಪ್ರಶ್ನಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.