ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರನ್ನು ಕರ್ನಾಟಕದ ಅತಿ ದೊಡ್ಡ ಸಮುದಾಯ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಕರ್ನಾಟಕ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ, ಮುಸ್ಲಿಮರನ್ನು ಕರ್ನಾಟಕದ ಅತಿ ದೊಡ್ಡ ಸಮುದಾಯ ಎಂದು ಬಿಂಬಿಸಿ ಅವರಿಗೆ ಹೆಚ್ಚಿನ ಮೀಸಲಾತಿ ಹಾಗೂ ಇನ್ನುಳಿದ ಸವಲತ್ತುಗಳನ್ನು ನೀಡುವ ಹುನ್ನಾರವನ್ನು ಸಿಎಂ ಹಾಗೂ ಅವರ ಕೆಲ ವಂಧಿಮಾಗದರು ನಡೆಸಿದ್ದಾರೆ ಎಂದು ಜಾತಿ ಗಣತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತಿಗಣತಿ ಎಂಬುದು ಓಲೈಕೆ ರಾಜಕಾರಣದ ಪಿತಾಮಹ ಸಿಎಂ ಸಿದ್ದರಾಮಯ್ಯ ಮತ್ತವರ ವಂಧಿಮಾಗದರು ಎಸಿ ರೂಂನಲ್ಲಿ ಕುಳಿತು ತಯಾರಿಸಿದ ವರದಿಯೇ ಹೊರತು, ಜನರ ಮನೆ ಬಾಗಿಲಿಗೆ ಹೋಗಿ ತಯಾರಿಸಿದ ವರದಿಯಲ್ಲ ಎಂಬುದು ಅಂಕಿ-ಸಂಖ್ಯೆಗಳಿಂದ ಋಜುವಾತಾಗುತ್ತಿದೆ ಎಂದು ಹೇಳಿದೆ.
‘ಅಹಿಂದ‘ದಿಂದ ಮುಂದೆ ಬಂದ ಸಿದ್ದರಾಮಯ್ಯ ಅವರು ಕೊನೆಗೂ ‘ಹಿಂದ‘ಕ್ಕೆ ದ್ರೋಹ, ‘ಅ‘ಕ್ಕೆ ಮಾತ್ರ ಒಳ್ಳೆಯ ಬಹುಮಾನ ನೀಡಿದ್ದಾರೆ ಎಂದು ವ್ಯಂಗ್ಯವಾಡಿದೆ.
ಇನ್ನೊಂದೆಡೆ ‘ಜಾತಿ ಗಣತಿಯು ಜನಗಣತಿಯಲ್ಲ. ಅದು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ. ಮುಖ್ಯಮಂತ್ರಿ ಮತ್ತು ನಾನು ಇನ್ನೂ ಆ ವರದಿಯನ್ನು ನೋಡಿಲ್ಲ. ನಾವು ಅದನ್ನು ಪರಿಶೀಲಿಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.