ಹುಬ್ಬಳ್ಳಿ: ಹದಿನೈದುಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಜನರೂ ಪಕ್ಷಾಂತರಿಗಳನ್ನು ಸೋಲಿಸಲು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಕೂಡಾ ಅವರನ್ನು ಸೋಲಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದವು ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,
‘ಕುಮಾರಸ್ವಾಮಿ ಏನು ಪ್ರಜ್ಞೆ ಇಟ್ಕೊಂಡು ಮಾತನಾಡಿದರೊ ಗೊತ್ತಿಲ್ಲ. ಜೆಡಿಎಸ್ನ ಜಿ.ಟಿ.ದೇವೇಗೌಡ ಅವರೇ, ಇತ್ತಿಚೆಗೆ ಮೈಸೂರು ಮತ್ತು ಕೊಡಗಿನಲ್ಲಿ ಬಿಜೆಪಿಗೆ ಓಟು ಹಾಕಿಸುವಂತೆ ಕುಮಾರಸ್ವಾಮಿ ನಮಗೆ ಹೇಳಿದ್ದರು ಎಂದಿದ್ದಾರೆ. ಹಾಗಾದರೆ, ಇದು ಯಾರ ನಾಟಕ?’ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರ ಕೆಟ್ಟದಾಗಿತ್ತು ಎಂಬುದನ್ನು ಸ್ವತಃ ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ, ನಾನೇನೂಹೇಳಲಾರೆ ಎಂದ ಅವರು, ಉಪ ಚುನಾವಣೆ ಬಂದಿರುವುದರಿಂದ ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಅನರ್ಹ ಶಾಸಕ ಎಚ್.ವಿಶ್ವನಾಥ ಅವರ ಸಿ.ಡಿ ಬಿಡುಗಡೆ ವಿಚಾರ ಕುರಿತ ಪ್ರಶ್ನೆಗೆ, ಅದನ್ನು ಸಾ.ರಾ.ಮಹೇಶ ಬಳಿ ಕೇಳಿ ಎಂದರು.
ನಾನು ಸರಿಯಾಗಿ ಮಾಡಿದ್ದೆ: ಸಿದ್ದರಾಮಯ್ಯ ಅವರ ಕಾರು ಹೊರಡುವಾಗ ರೈತನೊಬ್ಬ, ಸರ್ ನನ್ನ ಸಾಲ ಇನ್ನೂ ಮನ್ನಾ ಆಗಿಲ್ರಿ. ಏನಾದ್ರು ಮಾಡ್ರಿ ಎಂಬ ಮನವಿಗೆ ಪ್ರತಿಕ್ರಿಯಿಸಿ, ನಾನು ಸರಿಯಾಗಿ ಸಾಲ ಮನ್ನಾ ಮಾಡಿದ್ದೆ. ಕುಮಾರಸ್ವಾಮಿ ಮಾಡಿದ್ದು ಸರಿ ಇಲ್ಲಪ್ಪಾ ನಾನೇನು ಮಾಡಲಿ ಎಂದರು.
ಇನ್ನಷ್ಟು ಓದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.