ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ ವ್ಯಕ್ತಿಯ ವಿರುದ್ಧ ಕಾನೂನಿನ ಪ್ರಕಾರ ತಕ್ಷಣ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಿಷಯ ಪ್ರಸ್ತಾಪಿಸಿ, ‘ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡುವ ವೇಳೆ ಒಬ್ಬ ವ್ಯಕ್ತಿ, ಮುಖ್ಯಮಂತ್ರಿ 24 ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಇದನ್ನು ಕೇಳಿದ ಬಳಿಕವೂ ಕ್ರಮ ಕೈಗೊಳ್ಳದಿದ್ದರೆ ಹೇಗೆ? ಸರ್ಕಾರ ಇಷ್ಟೊಂದು ನಿಷ್ಕ್ರಿಯವಾಗಬೇಕೆ’ ಎಂದು ಪ್ರಶ್ನಿಸಿದರು.
ಅದಕ್ಕೆ ದನಿಗೂಡಿಸಿದ ಬಿಜೆಪಿಯ ವಿ. ಸುನಿಲ್ಕುಮಾರ್, ಎಸ್. ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ ಮತ್ತಿತರರು, ‘ಮುಖ್ಯಮಂತ್ರಿ ಕೊಲೆಗಾರ ಎಂದು ಹೇಳಿರುವುದು ಈ ಸದನಕ್ಕೆ ಮಾಡಿದ ಅಪಮಾನ. ಇದನ್ನು ಸಹಿಸಲು ಸಾಧ್ಯವಿಲ್ಲ. ಆತನ ಹೇಳಿಕೆಗಳ ಬಗ್ಗೆ ತನಿಖೆ ನಡೆಸಲು ಮತ್ತೊಂದು ಎಸ್ಐಟಿ ಮಾಡಿ’ ಎಂದು ಆಗ್ರಹಿಸಿದರು.
ಮಧ್ಯಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಈ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ಇರಲಿಲ್ಲ. ನಾನೇ ಹೋಗಿ ಅವರಿಗೆ ವಿವರಿಸಿದ್ದೇನೆ. ಅವರು ತಕ್ಷಣ ಗೃಹ ಸಚಿವರಿಗೆ ಸೂಚನೆ ನೀಡಿದ್ದಾರೆ. ಆತನ ಏನು ಹೇಳಿದ್ದಾನೆ, ಏಕೆ ಹೇಳಿದ್ದಾನೆ ಮತ್ತು ನನ್ನ ಬಗ್ಗೆಯೂ ಏನು ಮಾತನಾಡಿದ್ದಾನೆ ಎಂಬ ಅರಿವು ನನಗಿದೆ’ ಎಂದರು.
ಮಧ್ಯಪ್ರವೇಶಿಸಿದ ಆರ್. ಅಶೋಕ, ‘ಆತ ಹೇಳಿಕೆ ನೀಡಿ 48 ಗಂಟೆಯಾಗಿದೆ. ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಡಿ.ಕೆ .ಶಿವಕುಮಾರ್ ಅವರು ಬೇರೆ ಎಲ್ಲ ವಿಚಾರಗಳ ಬಗ್ಗೆ ತೊಡೆ ತಟ್ಟುತ್ತಾರೆ. ಆದರೆ, ಸಿದ್ದರಾಮಯ್ಯ ಅವರನ್ನು ಕೊಲೆಗಾರ ಎಂದಿರುವುದಕ್ಕೆ ಅಷ್ಟು ದೊಡ್ಡದಾಗಿ ಮಾತನಾಡದಿರುವುದು ಅಚ್ಚರಿಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.