ADVERTISEMENT

ನೆರೆ ಸಂತ್ರಸ್ತರಿಗೆ ಟ್ವೀಟ್ ಮೂಲಕವೂ ಸಾಂತ್ವನ ಹೇಳದ ಮೋದಿ: ಸಿದ್ಧರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 6:24 IST
Last Updated 3 ಜನವರಿ 2020, 6:24 IST
ಸಿದ್ಧರಾಮಯ್ಯ
ಸಿದ್ಧರಾಮಯ್ಯ   

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಬಂದಾಗ ನರೇಂದ್ರ ಮೋದಿ ಬರಲಿಲ್ಲ, ಕನಿಷ್ಠ ಪಕ್ಷಸಂತ್ರಸ್ತರಿಗೆ ಟ್ವೀಟ್ ಮೂಲಕವೂ ಸಾಂತ್ವನ ಹೇಳಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಗಳು ಬಹಳ ದಿನಗಳ ನಂತರ ಕರ್ನಾಟಕಕ್ಕೆ ಎರಡು ದಿನಗಳ ಭೇಟಿ ಕೊಟ್ಟಿದ್ದಾರೆ. ಮೋದಿ ಅವರ ಕರ್ನಾಟಕ್ಕೆ ಬರುವುದನ್ನು ನಾನು ಸ್ವಾಗತಿಸುತ್ತೇನೆ. ವಿರೋಧ ಪಕ್ಷವಾಗಿ ಅವರ ಆಗಮನವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಪ್ರಧಾನಿ ಹುದ್ದೆಯಾವ ಪಕ್ಷಕ್ಕೂ ಸೇರಿದ್ದಲ್ಲ ಅವರು130 ಕೋಟಿ ಜನರ ಪ್ರಧಾನ ಮಂತ್ರಿಗಳು. ಆದರೆ ಅವರುಕರ್ನಾಟಕದಲ್ಲಿ ಎಂದೂ ಕಂಡು ಕೇಳರಿಯದಂಥ ಪ್ರವಾಹ ಬಂದಾಗ ಅವರು ಬರಲಿಲ್ಲ.ಆಗಸ್ಟ್‌ 3ರಿಂದ 10ರವರೆಗೆ ಭೀಕರ ಪ್ರವಾಹ ಬಂದಿತ್ತು. ರಾಜ್ಯದ ಜನರು ಅನೇಕ ಕಷ್ಟನಷ್ಟಗಳನ್ನು ಅನುಭವಿಸಿದರೂ ಅವರು ಕಿವಿಗೊಡಲಿಲ್ಲ ಎಂದರು.

ADVERTISEMENT

22 ಜಿಲ್ಲೆ 103 ತಾಲ್ಲೂಕುಗಳಲ್ಲಿ ಪ್ರವಾಹ ಬಂದಿತ್ತು,ಅವರು ಭೇಟಿ ಕೊಟ್ಟು ಜನರ ಕಷ್ಟ ಆಲಿಸುವುದು ಇರಲಿ, ಸಣ್ಣ ಸಣ್ಣ ವಿಚಾರಗಳಿಗೆ ಟ್ವೀಟ್ ಮಾಡುವ ಅವರು ಸಂತ್ರಸ್ತರಿಗೆ ಟ್ವೀಟ್ ಮೂಲಕವೂ ಸಾಂತ್ವನ ಹೇಳಲಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಪ್ರವಾಹ ಬಂದಾಗ ನರೇಂದ್ರ ಮೋದಿ ಬರಲಿಲ್ಲ, ಕನಿಷ್ಠ ಪಕ್ಷಸಂತ್ರಸ್ತರಿಗೆ ಟ್ವೀಟ್ ಮೂಲಕವೂ ಸಾಂತ್ವನ ಹೇಳಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.

2009ರಲ್ಲಿ ಪ್ರವಾಹ ಬಂದಾಗ ನಮೋಹನ್ ಸಿಂಗ್ ಬಂದಿದ್ದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಅವರ ವೈಮಾನಿಕ ಸಮೀಕ್ಷೆ ನಡೆಸಿ, ರಾಯಚೂರಿನಲ್ಲಿ ಇಳಿದು, ಅಲ್ಲಿಯೇ ಸ್ಥಳದಲ್ಲಿಯೇ ₹1500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿ, ಪರಿಹಾರ ನೀಡಿದರು. ಅವರು ನಮ್ಮ ಪಕ್ಷದವರು ಎಂದು ಈ ಮಾತನ್ನು ಹೇಳುತ್ತಿಲ್ಲ ಎಂದರು.

ಈ ಸಲ ಪ್ರವಾಹದ ನಷ್ಟ ₹1 ಲಕ್ಷಕ್ಕೂ ಹೆಚ್ಚು ಕೋಟಿ ಆಗಿದೆ. ಯಡಿಯೂರಪ್ಪ ₹50 ಸಾವಿರ ಕೋಟಿ ನಷ್ಟ ಅಂತ ಹೇಳಿದ್ದರು. ಆದರೆ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಕಳುಹಿಸಿದ್ದೆ ₹30 ಸಾವಿರ ಕೋಟಿ ಅಂತೇ. ಆದರೆ ರಾಜ್ಯಕ್ಕೆ ಬಂದಿದ್ದ ಕೇಂದ್ರ ತಂಡ ₹ 3 ಸಾವಿರ ಕೋಟಿ ನಷ್ಟ ಅಂತ ಹೇಳಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದರು.

ರಾಜ್ಯ ಸರ್ಕಾರ 36 ಸಾವಿರ ಕೋಟಿ ನಷ್ಟ ಅಂತ ಕೇಳಿದ್ದಕ್ಕೆ ಕೇಂದ್ರ ನೀಡಿದ್ದು ಕೇವಲ ₹ 1200 ಕೋಟಿ ಮಾತ್ರ ಎಂದು ಮಾಹಿತಿ ನೀಡಿದರು.

ಸೆ.9ರಂದು ಬೆಂಗಳೂರಿಗೆ ಮೋದಿ ಬಂದಿದ್ದರು. ಅವತ್ತು ಇಸ್ರೊ ಚಂದ್ರಯಾನ ನೋಡಲು ಹೋಗಿದ್ರು. ಅದು ಕೂಡ ಫೇಲ್ ಆಯಿತು. ಈಗ ತುಮಕೂರಿಗೆ ಬಂದಿದ್ದಾರೆ. ಇದು ಬಹುಶಃ ಅವರು ಪ್ರಧಾನಿ ಆದ ಮೇಲೆ ಐದಾರು ಸಲ ಅಲ್ಲಿಗೆ ಬಂದಿದ್ದಾರೆ. ನಾನು ಸಿಎಂ ಆಗಿದ್ದಾಗಲೇ 2 ಸಲ ಬಂದಿದ್ರು. ಒಂದು ಲಘು ಯುದ್ಧ ಹೆಲಿಕಾಪ್ಟರ್, ಅದಾದ ಮೇಲೆ ಫುಡ್ ಪಾರ್ಕ್ ಉದ್ಘಾಟನೆಗೆ ಬಂದಿದ್ದರು ಈ ವೇಳೆ ನೇರ ಉದ್ಯೋಗಗಳು 10 ಸಾವಿರ ಆಗುತ್ತೆ ಆಂತ ಹೇಳಿದ್ರು. ಪರೋಕ್ಷವಾಗಿ 25 ಸಾವಿರ ಉದ್ಯೋಗ ಸೃಷ್ಟಿಯಾಗುತ್ತೆ ಅಂತ ಹೇಳಿದ್ರು ಈ ಮಾತನ್ನು ಅವರು ನೆನಪಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಉತ್ತರ ಭಾರತದವರೊಬ್ಬರು 50 ಕೋಟಿ ಸಬ್ಸಿಡಿ ತಗೊಂಡಿದ್ದಾರೆ.. ಅಸಾಮಿನೂ ಪತ್ತೆಯಿಲ್ಲ, ಉದ್ಯೋಗವೂ ಸೃಷ್ಟಿಯಾಗಲಿಲ್ಲ. ಲಘು ಯುದ್ಧ ಹೆಲಿಕಾಪ್ಟರ್‌ 2018ಕ್ಕೆ ಮೊದಲ ಹೆಲಿಕಾಪ್ಟರ್‌ ಅಂದಿದ್ರು. ಅದೂ ಆಗಲಿಲ್ಲ. ಹೇಮಾವತಿ–ನೇತ್ರಾವತಿ ಜೋಡಣೆ ಮೂಲಕ 8 ಜಿಲ್ಲೆಗಳಿಗೆ ನೀರಾವರಿ ಮಾಡ್ತೀವಿ ಅಂದ್ರು. ಅದು ಎಲ್ಲಿ ಜೋಡಣೆ ಆಗಿದೆಯೋ ಗೊತ್ತಿಲ್ಲ ನನಗೆ. ಕಳೆದ ಚುನಾವಣೆಯಲ್ಲಿ ಒಂದು ಮಾತು ಹೇಳಿದ್ರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತೆ ಆಂದಿದ್ರು. ರಾಜ್ಯಕ್ಕೆ ಭಾಗ್ಯದ ಬಾಗಿಲು ತೆರೆಯುವುದರಲಿ, ಬಿಜೆಪಿ ನಾಯಕರಿಗೆ ಮೋದಿ ಮನೆ ಬಾಗಿಲು ತೆರೆಯಲಿಲ್ಲ ಎಂದು ವ್ಯಂಗ್ಯವಾಡಿದರು.

ಇವರ ಮಾತು ಕೇಳಿ ಕರ್ನಾಟಕದ ಜನರು 25 ಲೋಕಸಭಾ ಸ್ಥಾನಗಳನ್ನು ಕೊಟ್ಟರು. ಇಷ್ಟು ಜನರು ಗೆದ್ದು, ಅವರ ಪಕ್ಷವೇ ಮುಖ್ಯಮಂತ್ರಿ ಆಗಿ ಈವರೆಗೆ 1200 ಕೋಟಿ ಕೊಟ್ಟಿದ್ದು ಬಿಟ್ರೆ ಏನೇನೂ ಕೊಡಲಿಲ್ಲ. ಅದಕ್ಕೆ ನಾನು ಯಡಿಯೂರಪ್ಪ ಅವರನ್ನು ದುರ್ಬಲ ಮುಖ್ಯಮಂತ್ರಿ ಎಂದು ಹೇಳುವುದು ಎಂದರು.

26 ಜನರನ್ನು ಕರೆದೊಯ್ದು ಪ್ರಧಾನಿ ಮನೆಯಲ್ಲಿ ಕುಳಿತುಕೊಳ್ಳಬೇಕಿತ್ತು. ಇದೊಂದು ರಷ್ಟ್ರೀಯ ವಿಪತ್ತು ಅಂತ ಘೋಷಿಸಿ ಅನ್ನಬೇಕಿತ್ತು. ಆದರೆ ನಿನ್ನೆ ಯಡಿಯೂರಪ್ಪ ಬಹಳ ಗೋಗರೆದು ಕೇಳಿಕೊಂಡಿದ್ದಾರೆ. ನಾವು ಕೇಳಿದ್ದು ನೀವು ಕೊಡಲಿಲ್ಲ ಅಂತ ಅಲವತ್ತುಕೊಂಡಿದ್ದಾರೆ. ದೇಶದ ಪ್ರಧಾನಿಯಾದವರು ಪರಿಶೀಲನೆ ನಡೆಸುತ್ತೇವೆ ಅಂತ ಹೇಳಬೇಕಿತ್ತು ಅಥವಾ ಇಷ್ಟನ್ನು ಕೊಡುತ್ತೇವೆ ಎಂದು ಹೇಳಬೇಕಿತ್ತು ಆದರೆ ಅವರು ಅದನ್ನು ಮಾಡಲಿಲ್ಲ.

ಕರ್ನಾಟಕದ ಬಗ್ಗೆ ಮೋದಿಗೆ ಇರುವ ಅಸಡ್ಡೆ ಮತ್ತು ನಿರ್ಲಕ್ಷ್ಯ ಇದರಿಂದ ಗೊತ್ತಾಗುತ್ತೆ. ‘ನಮಗೆ ವೋಟ್ ಕೊಡಬೇಡಿ, ನರೇಂದ್ರ ಮೋದಿ ಅವರಿಗೆ ವೋಟ್ ಕೊಡಿ’ ಅಂತ ಕೇಳಿದ್ರು. ರಾಜ್ಯದ ಜನರು ಮೋದಿಗೆ ವೋಟ್ ಹಾಕಿ ಇವತ್ತು ನರೇಂದ್ರ ಮೋದಿ ಕರ್ನಾಟಕಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ. ಇದನ್ನು ಹೇಳಿದರೆ ಬಿಜೆಪಿಯವರಿಗೆ ಕೋಪ ಬರುತ್ತೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.