ADVERTISEMENT

ಸಿದ್ದರಾಮಯ್ಯ ಸ್ಥಾನಕ್ಕೇ ಕಂಟಕ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 26 ಮೇ 2021, 21:20 IST
Last Updated 26 ಮೇ 2021, 21:20 IST
   

ಬೆಂಗಳೂರು: ‘ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಖಂಡಿತಾ ಇಲ್ಲ. ಆದರೆ, ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ಸ್ಥಾನದಿಂದ ಕಿತ್ತೊಗೆಯಲು ಕಾಂಗ್ರೆಸ್‌ ನಾಯಕರೇ ಪಣ ತೊಟ್ಟಿದ್ದಾರೆ’ ಎಂದು ಬಿಜೆಪಿ ಶಾಸಕರು ಹರಿಹಾಯ್ದಿದ್ದಾರೆ.

‘ಬಿಜೆಪಿಯವರೇ ಮುಖ್ಯಮಂತ್ರಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ಅಧಿಕಾರ ಗಗನ ಕುಸುಮವಾಗಿರುವಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರು 60 ರಿಂದ 70 ಪಂಚೆಗಳನ್ನು ಖರೀದಿಸಿರಬಹುದು. ಯಡಿಯೂರಪ್ಪ ಅವಧಿ ಮುಗಿಸಲಿದ್ದು, ಅವರ ಬದಲಾವಣೆ ಪ್ರಶ್ನೆಯೇ ಇಲ್ಲ. ಮೊದಲು ಸಿದ್ದರಾಮಯ್ಯ ಪ್ರತಿಪಕ್ಷ ಸ್ಥಾನವನ್ನು ಉಳಿಸಿಕೊಳ್ಳಲಿ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್.ವಿಶ್ವನಾಥ್‌ ಸುದ್ದಿಗಾರರಿಗೆ ಹೇಳಿದರು.

ADVERTISEMENT

ಕೆಲವರು ದೆಹಲಿಗೆ ಹೋದ ತಕ್ಷಣ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಅರ್ಥೈಸಿಕೊಳ್ಳುವ ಅಗತ್ಯವಿಲ್ಲ. ಕೆಲವರು ಇಂತಹ ಗಾಳಿ ಸುದ್ದಿಗಳನ್ನು ಹರಡಲೆಂದೇ ಇರುತ್ತಾರೆ. ಇಂತಹವರಿಗೆ ಭ್ರಮನಿರಸನವಾಗಲಿದೆ ಎಂದು ತಿಳಿಸಿದರು.

‘ಯಡಿಯೂರಪ್ಪ ಬದಲಾವಣೆ ಬಗ್ಗೆ ಕೆಲವು ಶಾಸಕರು ಪ್ರಯತ್ನ ಮಾಡುತ್ತಿದ್ದಾರೆಂಬುದು ಕೇವಲ ಊಹಾಪೋಹ. ಹಾಗೊಂದು ವೇಳೆ ಪ್ರಯತ್ನ ನಡೆಸಿದ್ದರೆ ಅದು ಕೈಗೂಡುವುದಿಲ್ಲ’ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿರುಗೇಟು ನೀಡಿದರು.

‘ಯಾರೋ ಕೆಲವರು ದೆಹಲಿಗೆ ಹೋದ ತಕ್ಷಣಕ್ಕೆ ಯಡಿಯೂರಪ್ಪ ಬದಲಾವಣೆ ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವು ಅವರ ಪರ ಸಹಿ ಸಂಗ್ರಹ ಮಾಡುವ ಅಗತ್ಯವೂ ಇಲ್ಲ’ ಎಂದು ಅವರು ಹೇಳಿದರು.

ಶಾಸಕ ನಿರಂಜನ್ ಕುಮಾರ್ ಮತ್ತು ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರ್ ಗೌಡ ಪಾಟೀಲ ಇದಕ್ಕೆ ಧ್ವನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.