ಬೆಂಗಳೂರು: ‘ವಿಧಾನಸೌಧದಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸಿದ್ದಾರೆ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆರೋಪಿಸಿದರು.
‘ಕಾಂಗ್ರೆಸ್ ಚಿಹ್ನೆ ಮೇಲೆ ಸುಧಾಕರ್ ಆಯ್ಕೆ ಆಗಿದ್ದಾರೆ. ಬಿಜೆಪಿಗೂ ಸುಧಾಕರ್ಗೂ ಏನು ಸಂಬಂಧ? ನಾನು ಶಾಸಕಾಂಗ ಪಕ್ಷದ ನಾಯಕ ಆಗಿರುವುದರಿಂದ ನಮ್ಮ ಪಕ್ಷದ ಶಾಸಕರ ಜತೆ ಚರ್ಚಿಸಲು ಬಂದಿದ್ದೇನೆ. ಆದರೆ ಇಲ್ಲಿ ನೋಡಿದರೆ ಬಿಜೆಪಿಯವರು ಗೂಂಡಾಗಳಂತೆ ನಡೆದುಕೊಂಡಿದ್ದಾರೆ‘ ಎಂದರು.
‘ಗದ್ದಲ ನಡೆಸುತ್ತಿರುವುದರ ಹಿಂದೆ ಬಿಜೆಪಿ ನಾಯಕರು ಇದ್ದಾರೆ. ನಮ್ಮ ಶಾಸಕರ ಜತೆ ಮಾತನಾಡಲು ಬಂದರೆ ತಡೆಯುತ್ತಾರೆ. ಇದೆಲ್ಲವನ್ನೂ ಗಮನಿಸಿದರೆ ಶಾಸಕರನ್ನು ಖರೀದಿಸುತ್ತಿರುವುದು ಸ್ಪಷ್ಟವಾಗುತ್ತದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದಾರೆ’ ಎಂದು ಟೀಕಿಸಿದರು.
ವಿಧಾನಸೌಧದಲ್ಲಿ ನಡೆದ ಘಟನೆಗೂ ಬಿಜೆಪಿಗೂ ಸಂಬಂಧ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದರು.
ಬಿಜೆಪಿ ಆರೋಪ: ವಿಧಾನಸೌಧದ ಒಳಗೆ ಶಾಸಕರ ಮೇಲೆ ಗೂಂಡಾಗಿರಿ ನಡೆಸಲಾಗಿದೆ. ಈ ವಿಚಾರ ವಿಧಾನಸಭಾಧ್ಯಕ್ಷರಿಗೆ ಗೊತ್ತಿದ್ದೂ ಹಲ್ಲೆಗೆ ಒಳಗಾದ ಶಾಸಕರಿಗೆ ರಕ್ಷಣೆ ನೀಡಿಲ್ಲ. ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ರಾಜೀನಾಮೆ ನೀಡಲು ಬರುವ ಶಾಸಕರಿಗೆ ರಕ್ಷಣೆ ನೀಡಬೇಕು ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.