ಮೈಸೂರು: ‘ಗೋಡ್ಸೆ, ಸಾವರ್ಕರ್ ಪೂಜಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ದೇಶಭಕ್ತಿಯ ಪಾಠವನ್ನು ಇಂಥವರಿಂದ ಹೇಳಿಸಿಕೊಳ್ಳಬೇಕಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಇಲ್ಲಿ ಕಿಡಿಕಾರಿದರು.
ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕ್ರೂರತ್ವ ಮನೋಭಾವದವರಿಗೆ ಸತ್ಯ, ಅಹಿಂಸೆ ಅರ್ಥವಾಗುವುದಿಲ್ಲ. ಅನಂತಕುಮಾರ ಹೆಗಡೆಗೆ ವಯಸ್ಸೆಷ್ಟು? ಇವನು ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ್ದನಾ? ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವನಿಗೇನು ಗೊತ್ತು?’ ಎಂದು ಹರಿಹಾಯ್ದರು.
‘ಜಗತ್ತಿನಲ್ಲಿ, ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಪಡೆದ ದೇಶ ಭಾರತ. ಇತಿಹಾಸ ಗೊತ್ತಿಲ್ಲದಿದ್ದರೆ, ಹಿರಿಯರಿಂದ ಕೇಳಿ ತಿಳಿದುಕೊಳ್ಳಲಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಿದ್ದರು. ಇದು ಅವನಿಗೆ ಗೊತ್ತಾ ? ಆದರೆ ಇಂದು ಅವರೇ ಸರ್ದಾರರ ಬೃಹತ್ ಮೂರ್ತಿ ನಿರ್ಮಿಸಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.
ದುಡ್ಡು ತೆಗೆದುಕೊಂಡಿದ್ದನ್ನೂ ಬರೆಯಲಿ: ‘ಎಚ್.ವಿಶ್ವನಾಥ್ ದೊಡ್ಡ ಬರಹಗಾರರು. ಆಪರೇಷನ್ ಕಮಲದ ಬಗ್ಗೆ ಪುಸ್ತಕ ಬರೆಯಲಿ. ನಾವೂ ಓದೋಣ’ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ‘ಅವರು ದುಡ್ಡು ತೆಗೆದುಕೊಂಡಿದ್ದನ್ನೂ ಅದರಲ್ಲಿ ಬರೆಯಲಿ’ ಎಂದು ಕುಟುಕಿದರು.
ಪಕ್ಷಾಂತರಿಗಳಿಗೆ ಹಂಗೇ ಆಗಬೇಕು. ನನ್ನ ಪ್ರಕಾರ, ಅವರು ಅತಂತ್ರರಾಗಿರೋದು ಸರಿಯಾಗಿದೆ. ಪಕ್ಷದ್ರೋಹಿಗಳಿಗೆ ತಕ್ಕ ಪಾಠವಾಗುತ್ತಿದೆ
- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.