ADVERTISEMENT

ಸಿದ್ದೇಶ್ವರ ಸ್ವಾಮೀಜಿ ಅತ್ಯಂತ ಮೇಲ್ಪಂಕ್ತಿಯ ಸಂತ: ಮುಖ್ಯಮಂತ್ರಿ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 19:45 IST
Last Updated 2 ಜನವರಿ 2023, 19:45 IST
   

ಬೆಂಗಳೂರು: 'ಜ್ಞಾನಯೋಗಿ ಸಿದ್ದೇಶ್ವರ ಸಂತ ನಮ್ಮನ್ನು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಅವರ ಪ್ರವಚನದಲ್ಲಿ ಎಷ್ಟು ಶಾಂತಿ ಇತ್ತೊ ಅಷ್ಟೇ ಶಾಂತಿ ಮತ್ತು ಗೌರವದಿಂದ ಅವರ ಅಂತಿಮ ಯಾತ್ರೆ ಮಾಡೋಣ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರ್. ಟಿ. ನಗರದ ತಮ್ಮ ನಿವಾಸದ ಬಳಿ ಸೋಮವಾರ ರಾತ್ರಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರವೂ ಬದುಕುವವನು ಸಾಧಕ . ಈ ಮಾತು ಸಿದ್ದೇಶ್ವರ ಸ್ವಾಮೀಜಿಗಳಿಗೆ ಅನ್ವಯವಾಗುತ್ತದೆ. ಅವರ ವಿಚಾರ, ತತ್ವ ಸಿದ್ದಾಂತ, ನಡೆ‌ ನುಡಿಯಲ್ಲಿ ಅವರು ಸದಾಕಾಲ ನಮ್ಮೊಂದಿಗೆ ಇರುತ್ತಾರೆ ಎನ್ನುವ ನಂಬಿಕೆ ನನಗಿದೆ. ಮುಂದಿನ ಜನಾಂಗ ಸಿದ್ದೇಶ್ವರ ಗುರುಗಳನ್ನು ನೆನೆಸಿಕೊಳ್ಳುತ್ತದೆ. ಸಿದ್ದೇಶ್ವರ ಸ್ವಾಮಿಜಿ ಅವರ ಕಾಲದಲ್ಲಿ ನಾವಿದ್ದೇವು ಎನ್ನುವುದು ಭಾಗ್ಯ. ಅವರು ಯಾವುದೇ ಪಂಥ, ಮತ ಪಾಲಿಸಿದವರಲ್ಲ. ಅವರ ನಡೆ ನುಡಿಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಅವರು ಅತ್ಯಂತ ಮೇಲ್ಪಂಕ್ತಿಯ ಸಂತ. ಅವರು ಯಾರಿಂದಲೂ ಏನನ್ನೂ ಬೇಡಿಲ್ಲ. ಅಪಾರ ಜ್ಞಾನ ಭಂಡಾರವನ್ನು ಕೊಟ್ಟುಹೋಗಿದ್ದಾರೆ ಎಂದರು.

'ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳ ಅಗಲಿಕೆಯಿಂದ ಇಡೀ ಭಕ್ತ ಸಮೂಹ ದುಖದಲ್ಲಿ ಮುಳುಗಿದೆ. ಅವರು ನಿರ್ಮೋಹಿಯಾಗಿದ್ದರು. ಅವರು ದೊಡ್ಡ ಆಶ್ರಮ ಕಟ್ಟಬೇಕೆಂದು ಬಯಸಿದವರಲ್ಲ. ಎಷ್ಟೊ ಜನ ಸಾಯುವ ಮೊದಲೇ ಸಮಾಧಿ ಕಟ್ಟಿಸಿದವರಿದ್ದಾರೆ. ನಾನು ಯಾರ ಬಗ್ಗೆಯೂ ಮಾತನಾಡುತ್ತಿಲ್ಲ. ಸಂದರ್ಭ ಹಾಗಿದೆ' ಎಂದರು.

ADVERTISEMENT

'ನಾನು ಅವರೊಂದಿಗೆ ಸುಮಾರು 25 ವರ್ಷಗಳಿಂದ ಸಂಪರ್ಕ ಇಟ್ಟುಕೊಂಡಿದ್ದೇನೆ. ಅವರು ಮನುಕುಲದ ಬಗ್ಗೆ ಆದ್ಯಾತ್ಮದ ಬಗ್ಗೆ ಸಾಕಷ್ಟು ಮಾರ್ಗದರ್ಶನ ಮಾಡಿದ್ದಾರೆ. ನನ್ನ ಕ್ಷೇತ್ರದ ಅತ್ತಿಗೆರೆ ಬಗ್ಗೆ ಅಪಾರವಾದ ಪ್ರೀತಿ, ನಾಲ್ಕೈದು ತಿಂಗಳ ಹಿಂದೆ ನಾನು ಭೇಟಿಯಾದಾಗ ನಾನು ಅತ್ತಿಗೆರೆಗೆ ಬರುತ್ತೇನೆ' ಎಂದು ಹೇಳಿದರು.

'ನಾನು ವಿಜಯಪುರಕ್ಕೆ ಹೋದಾಗ ನಗುನಗುತ್ತ ನನ್ನೊಂದಿಗೆ ಮಾತನಾಡಿದ್ದರು. ಪ್ರಧಾನಿಯವರು ದೂರವಾಣಿ ಕರೆ ಮಾಡಿದಾಗಲೂ ಅವರ ಧ್ವನಿ ಗುರುತಿಸಿ ಮಾತನಾಡಿದ್ದರು. ಮಂಗಳವಾರ ಮಧ್ಯಾಹ್ನ ಒಂದೂವರೆಗೆ ಗಂಟೆಗೆ ನಾನು ವಿಜಯಪುರಕ್ಕೆ ಹೋಗುತ್ತೇನೆ. ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.