ಬೆಂಗಳೂರು: ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ‘ಸಿದ್ದರಾಮಯ್ಯ- 75– ಅಮೃತ ಮಹೋತ್ಸವ’ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆ ಬುಧವಾರ ಅರಮನೆ ಮೈದಾನದಲ್ಲಿ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ಸಮಾವೇಶದ ರೂಪುರೇಷೆಯ ಕುರಿತು ಚರ್ಚೆ ನಡೆಯಲಿದೆ. ಸಭೆಯಲ್ಲಿ 800ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಂಜೆ 6 ಗಂಟೆಗೆ ಏಟ್ರಿಯಾ ಹೋಟೆಲ್ನಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿಯ ಸಭೆ ನಡೆಯಲಿದೆ.
ಸಮಾವೇಶದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಪಿ.ಎಂ. ಅಶೋಕ ಪಟ್ಟಣ, ‘ಈ ಕಾರ್ಯಕ್ರಮ 130 ಎಕರೆ ಜಾಗದಲ್ಲಿ ನಡೆಯಲಿದೆ’ ಎಂದರು.
‘ಪ್ರತಿ ತಾಲ್ಲೂಕಿನಿಂದ ಬಸ್, ಟ್ರ್ಯಾಕ್ಟರ್ಗಳಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು, ಹಿತೈಷಿಗಳು ಬರಲಿದ್ದು, ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ. ವಾಹನ ನಿಲುಗಡೆಗೆ 50 ಎಕರೆ, ಸಮಾವೇಶಕ್ಕೆ 50 ಹಾಗೂ ಭೋಜನ ವ್ಯವಸ್ಥೆಗೆ 30 ಎಕರೆ ಗುರುತಿಸಲಾಗಿದೆ. ಬೆಳಗ್ಗಿನಿಂದ ಸಂಜೆಯವರೆಗೂ ಊಟದ ವ್ಯವಸ್ಥೆ ಇರಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.