ಬೆಂಗಳೂರು: ಬರಗಾಲದ ಕಾರಣ ‘ಹಂಪಿ ಉತ್ಸವ’ ರದ್ದುಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಈಗ ವಿವಾದಕ್ಕೆ ಎಡೆ ಮಾಡಿದೆ.
ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರಳವಾಗಿ ಹಂಪಿ ಉತ್ಸವ ಆಚರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ಬರದ ಕಾರಣ ಉತ್ಸವ ಮುಂದೂಡಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ತೀರ್ಮಾನ ಮಾಡಿದ್ದರು’ ಎಂದು ಅವರು ಹೇಳಿದರು.
‘ಟವೆಲ್ ಹಾಸಿ ಭಿಕ್ಷೆ ಬೇಡಿಯಾದರೂ ಉತ್ಸವ ಆಚರಿಸುತ್ತೇವೆ ಎಂದು ಕೆಲವರು ಹೇಳಿದ್ದಾರೆ. ಆ ಮಂದಿ ಬಳ್ಳಾರಿ ಜಿಲ್ಲೆಯನ್ನು ಹೇಗೆ ದರೋಡೆ ಮಾಡಿದ್ದಾರೆ ಎಂಬುದು ಗೊತ್ತಿದೆ’ ಎಂದು ಅವರು ರೆಡ್ಡಿಗೆ ತಿರುಗೇಟು ನೀಡಿದರು.
ಭಿಕ್ಷೆ ಬೇಡಿ ಉತ್ಸವ: ಸರ್ಕಾರದ ಕ್ರಮವನ್ನು ಬಳ್ಳಾರಿಯ ಮಾಗಳ ಗ್ರಾಮದ ಮಳೆಯೋಗೀಶ್ವರ ಸ್ವಾಮಿಗಳು ಕಟುವಾಗಿ ಟೀಕಿಸಿದ್ದು, ಭಿಕ್ಷೆ ಬೇಡಿಯಾದರೂ ಹಂಪಿ ಉತ್ಸವ ನಡೆಸುವುದಾಗಿ ಹೇಳಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಸ್ವಾಮೀಜಿಯವರ ಬೆಂಬಲಕ್ಕೆ ನಿಂತಿದ್ದಾರೆ.
‘ಸರ್ಕಾರದ ನಿರ್ಧಾರದಿಂದ ಬೇಸತ್ತಿರುವ ಮಠಾಧೀಶರೇ ಬೀದಿಗೆ ಇಳಿದು ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಹಂಪಿ ಉತ್ಸವ ಆಚರಿಸಲು ಭಿಕ್ಷೆ ಯಾಚಿಸುತ್ತಿದ್ದಾರೆ. ಹಂಪಿ ಉತ್ಸವ ಆಚರಿಸಲು ಸ್ವಾಮೀಜಿಗಳು ಭಿಕ್ಷೆ ಬೇಡುತ್ತಿದ್ದಾರೆ ಎಂದರೇನು ಅರ್ಥ? ಸರ್ಕಾರ ನಡೆಸುತ್ತಿರುವವರು ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಗತ ಕಾಲದ ಇತಿಹಾಸ ಕಡೆಗಣಿಸುತ್ತಿದ್ದಾರೆಂದೇ ಅರ್ಥವಲ್ಲವೇ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.
*ಹಂಪಿ ಉತ್ಸವ ಆಚರಿಸಬೇಕು ಎಂದು ಸಂಸದ ವಿ.ಎಸ್.ಉಗ್ರಪ್ಪ ಕೋರಿದ್ದಾರೆ. ಜನರೂ ಒತ್ತಾಯಿಸಿದ್ದಾರೆ. ಹೀಗಾಗಿ, ಉತ್ಸವ ಆಚರಿಸಲಿದ್ದೇವೆ
-ಸಿ.ಎಂ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.