ADVERTISEMENT

ಕಾಂಗ್ರೆಸ್‌ ಮತಬ್ಯಾಂಕ್‌ ಒಡೆಯಲು ಮುಸ್ಲಿಮರನ್ನು ಕಣಕ್ಕಿಳಿಸಿಲ್ಲ: ಎಚ್‌ಡಿಕೆ

ಸಿಂದಗಿ, ಹಾನಗಲ್‌ ವಿಧಾನಸಭಾ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 13:24 IST
Last Updated 7 ಅಕ್ಟೋಬರ್ 2021, 13:24 IST
ಸಿಂದಗಿ ವಿಧಾನಸಭೆ ಉಪ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಶಕೀಲ್‌ ಅಂಗಡಿ ಗುರುವಾರ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಅವರಿಗೆ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪುರ ಇದ್ದಾರೆ –ಪ್ರಜಾವಾಣಿ ಚಿತ್ರ
ಸಿಂದಗಿ ವಿಧಾನಸಭೆ ಉಪ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಶಕೀಲ್‌ ಅಂಗಡಿ ಗುರುವಾರ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಅವರಿಗೆ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪುರ ಇದ್ದಾರೆ –ಪ್ರಜಾವಾಣಿ ಚಿತ್ರ   

ವಿಜಯಪುರ: ಕಾಂಗ್ರೆಸ್‌ ಮತಬ್ಯಾಂಕ್‌ ಒಡೆಯುವ ಸಲುವಾಗಿ ಸಿಂದಗಿ, ಹಾನಗಲ್‌ ಉಪಚುನಾವಣೆಗೆ ಅಲ್ಪ ಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ನಮ್ಮ ಪಕ್ಷವು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಕ್ಕೆ ಕಾಂಗ್ರೆಸ್‌ನವರು ಕೀಳುಮಟ್ಟದ ಪ್ರಚಾರ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಸಿಂದಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರ ನಿಜ ಬಣ್ಣ ಬಯಲು ಮಾಡಲೆಂದೇ ಹಾಗೂ ಅವರ ಅಪಪ್ರಚಾರಕ್ಕೆ ಉತ್ತರ ನೀಡಲೆಂದೇ ಎರಡೂ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾವಂತರನ್ನು ಕಣಕ್ಕಿಳಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ ನಾಯಕರ ಅನುಮತಿ ಪಡೆದು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡ ಬೇಕಿತ್ತೇ? ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಉಪ ಚುನಾವಣೆಗೆ ಅಲ್ಪ ಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಳಿಸಿದ್ದೇ ಆಗಿದ್ದರೆ ನಾನೇಕೆ ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುತ್ತಿದ್ದೆ ಎಂದು ಪ್ರಶ್ನಿಸಿದರು.

ADVERTISEMENT

ದೇಶದಲ್ಲಿ ಪ್ರಸ್ತುತ ಪ್ರಜಾಪ್ರಭುತ್ವ ಸರ್ಕಾರ ಅಧಿಕಾರದಲ್ಲಿ ಇಲ್ಲ. ಆರ್‌ಎಸ್‌ಎಸ್‌ ಕಪಿಮುಷ್ಠಿಯಲ್ಲಿ ಇರುವ ಸರ್ಕಾರ ಅಧಿಕಾರದಲ್ಲಿದೆ. ಇಂದಿನ ಆರ್‌ಎಸ್‌ಎಸ್‌ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್‌ನ ಯಾರಿಗಾದರೂ ಧ್ವನಿ ಎತ್ತುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದರು.

ನಾಜಿಯಾ ನಾಮಪತ್ರ ಸಲ್ಲಿಕೆ

ವಿಜಯಪುರ: ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಶಕೀಲ್‌ ಅಂಗಡಿ ಗುರುವಾರ ನಾಮಪತ್ರ ಸಲ್ಲಿಸಿದರು.

ನಾಜಿಯಾ ಅವರ ಬಳಿ 520 ಗ್ರಾಂ ಬಂಗಾರ(24 ಲಕ್ಷ), 50 ಗ್ರಾಂ ಬೆಳ್ಳಿ, ಟಾಟಾ ಸಫಾರಿ ಜೀಪ್‌(13 ಲಕ್ಷ), ಫೆಡರಲ್‌ ಬ್ಯಾಂಕ್‌ ಅಥಣಿ ಶಾಖೆಯಲ್ಲಿ ರೂ 4.24 ಲಕ್ಷ, ನಗದು 2 ಲಕ್ಷ ಹಾಗೂ ಚರಾಸ್ತಿ ರೂ 10.70 ಲಕ್ಷ, ಸ್ಥಿರಾಸ್ತಿ ರೂ 1 ಲಕ್ಷ, ಸಿಂದಗಿಯಲ್ಲಿ 1 ಎಕರೆ ಜಮೀನು(1 ಲಕ್ಷ ಮೌಲ್ಯ), ಫ್ಯಾಟ್‌ ಖರೀದಿಗೆ ಮುಂಗಡವಾಗಿ ರೂ 7.7 ಲಕ್ಷ ನೀಡಿರುವುದು ಸೇರಿದಂತೆ ಒಟ್ಟು ರೂ.49,85,912 ಲಕ್ಷಗಳ ಒಡತಿಯಾಗಿರುವುದಾಗಿ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಪತಿ, ಸಿಪಿಐ ಶಕೀಲ್‌ ಅಂಗಡಿ ಅವರ ಬಳಿ 6 ಎಕರೆ ಕೃಷಿ ಭೂಮಿ(9.60 ಲಕ್ಷ ಮೌಲ್ಯ), ಎಸ್‌ಬಿಐ ಕಲಬುರ್ಗಿ ಶಾಖೆಯಲ್ಲಿ ರೂ 1.65 ಲಕ್ಷ ಹಾಗೂ 50 ಸಾವಿರ ನಗದು, ಎಲ್‌ಐಎಸಿ ಬಾಂಡ್‌ ಸೇರಿದಂತೆ ಒಟ್ಟು ರೂ 24.70 ಲಕ್ಷ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.