ವಿಜಯಪುರ: ‘ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ಎಲ್ರೂ ಒಂದೇ ಲಗ್ನವಾಗಬೇಕು. ಎರಡೇ ಮಕ್ಕಳನ್ನಷ್ಟೇ ಹೊಂದಬೇಕು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಸಿದ್ಧೇಶ್ವರ ಸಂಸ್ಥೆಯಿಂದ ಮಂಗಳವಾರ ಬಸವ ಜಯಂತಿ ಆಚರಣೆ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ, ‘ಕಾಶ್ಮೀರಕ್ಕಿರುವ 370ನೇ ವಿಧಿಯನ್ನು ರದ್ದುಗೊಳಿಸಲಿದ್ದೇವೆ’ ಎಂದರು.
‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ. ಇದೇ ರೀತಿ ಕಾಶಿ ವಿಶ್ವನಾಥ ಮಂದಿರ ಪಕ್ಕ ಸ್ವಚ್ಛಗೊಳಿಸಿ, ಪುನರ್ ನಿರ್ಮಾಣ ಕೈಗೊಳ್ಳಲಾಗುವುದು’ ಎಂದು ಯತ್ನಾಳ ಹೇಳಿದರು.
‘ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಬಳಿಕ ಡೈನಾಮಿಕ್ ಲೀಡರ್ ನಾನೇ. ಎಲ್ಲ ರೀತಿಯಿಂದಲೂ ಅರ್ಹನಿರುವೆ ಎಂಬುದು ರಾಷ್ಟ್ರೀಯ ಹೈಕಮಾಂಡ್ಗೂ ಗೊತ್ತಿದೆ. ಈ ಕುರಿತಂತೆ ಈಗಾಗಲೇ ವರಿಷ್ಠರೊಬ್ಬರು ಮಾಹಿತಿ ಪಡೆದಿದ್ದಾರೆ’ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.