ಕಾಸರಗೋಡು: ಶ್ರೀಲಂಕಾದಲ್ಲಿ ಸ್ಫೋಟ ನಡೆಸಿ 253 ಜನರ ಸಾವಿಗೆ ಕಾರಣರಾದ ನ್ಯಾಷನಲ್ ತೌಹೀದ್ ಜಮಾತ್ (ಎನ್ಟಿಜೆ) ಹಾಗೂ ಇಸ್ಲಾಮಿಕ್ ಸ್ಟೇಟ್ ಬೆಂಬಲಿಗರ ಕೇರಳದ ಘಟಕವು ಕೊಚ್ಚಿಯಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ಬಂಧಿತ ಪಾಲ್ಘಾಟ್ ಕೊಲ್ಲಂಗೋಡು ನಿವಾಸಿ ರಿಯಾಜ್ ಅಬೂಬಕ್ಕರ್ (28) ಎನ್ಐಎ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ರಿಯಾಜ್ ಅಬೂಬಕ್ಕರ್ನನ್ನು ಸೋಮವಾರ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 24 ಗಂಟೆಗಳ ನಿರಂತರ ವಿಚಾರಣೆ ವೇಳೆ ಸಂಚಿನ ಬಗ್ಗೆ ವಿವರಣೆ ನೀಡಿದ್ದಾನೆ.
ಇಸ್ಲಾಮಿಕ್ ಸ್ಟೇಟ್ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದ ಕಾಸರಗೋಡಿನ ಇಬ್ಬರು, ಪಾಲ್ಘಾಟ್ನ ಒಬ್ಬ, ಕೊಲ್ಲಂ ಜಿಲ್ಲೆಯ ಕುಂಡರದ ಒಬ್ಬ ಸೇರಿದಂತೆ ಐವರು ಹಾಗೂ ಕೊಯಮತ್ತೂರಿನಲ್ಲಿ ನಾಲ್ವರನ್ನು ಎನ್ಐಎ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಬಂಧಿತ ರಿಯಾಜ್ ಅಬೂಬಕ್ಕರ್ ಹೊಸ ವರ್ಷದ ದಿನಾಚರಣೆಯಂದು ಕೊಚ್ಚಿಯ ಜನನಿಬಿಡ ಹಾಗೂ ವಿದೇಶಿ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಆದರೆ ಆತನ ಸಹಚರರು ಇದಕ್ಕೆ ಸಹಕರಿಸದ ಕಾರಣ ಅಂದಿನ ದಾಳಿ ಕೈಬಿಟ್ಟಿದ್ದ. ಬಳಿಕ ತಾನೇ ಆತ್ಮಾಹುತಿ ದಾಳಿ ನಡೆಸಲು ಬೇಕಾದ ಸ್ಫೋಟಕ ವಸ್ತು ಸಂಗ್ರಹ ಮಾಡುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.