ನಂಜನಗೂಡು: ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಕೊಂತಯ್ಯನಹುಂಡಿಯಲ್ಲಿ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಉಂಟಾದ ಜಗಳದಿಂದ ಮುಖಂಡರು ತಮ್ಮ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಗುರುಮಲ್ಲಪ್ಪ, ಪರಶಿವಪ್ಪ, ದೊರೆಸ್ವಾಮಿ ಎಂಬುವವರು ದೂರಿದ್ದಾರೆ.
ಬಹಿಷ್ಕಾರಕ್ಕೆ ಒಳಗಾಗಿರುವ ಮೂರು ಕುಟುಂಬದವರು ಕವಲಂದೆ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್ ಶಿವಮೂರ್ತಿ ಅವರಿಗೆ ದೂರು ಸಲ್ಲಿಸಿದ್ದಾರೆ.
‘ಗ್ರಾಮದ ರಸ್ತೆ ವಿಚಾರವಾಗಿ ಆರು ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಕೋಪಗೊಂಡು ಸ್ವಜಾತಿ (ಲಿಂಗಾಯತರು) ಮುಖಂಡರಾದ ಗೌಡಿಕೆ ಪುಟ್ಟಸ್ವಾಮಿ, ಮರಿಸ್ವಾಮಿ, ಪುಟ್ಟಬುದ್ದಿ ಎಂಬುವವರು ನಮ್ಮ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ಅಂಗಡಿಗಳಲ್ಲಿ ನಾವು ಖರೀದಿ ಮಾಡುವಂತಿಲ್ಲ. ನಮ್ಮ ಜಮೀನುಗಳಿಗೆ ಗ್ರಾಮದ ಯಾರೂ ಕೆಲಸಕ್ಕೆ ಬರುವಂತಿಲ್ಲ. ದೇವಾಲಯಗಳಿಗೆ ನಾವು ಪ್ರವೇಶಿಸುವಂತಿಲ್ಲ. ಗ್ರಾಮಸ್ಥರು ನಮ್ಮನ್ನು ಮಾತನಾಡಿಸುವಂತಿಲ್ಲಎಂದು ತಾಕೀತು ಮಾಡಿದ್ದಾರೆ‘ ಎಂದು ಗುರುಮಲ್ಲಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ‘ಗ್ರಾಮದ ಕೆಲವರು ದೂರುದಾರರನ್ನು ಮಾತನಾಡಿಸುತ್ತಿಲ್ಲ ಎನ್ನುವುದು ಬಿಟ್ಟರೆ ಸಾಮಾಜಿಕ ಬಹಿಷ್ಕಾರದಂತಹ ಘಟನೆ ನಡೆದಿಲ್ಲ. ಈಗಾಗಲೇ ಒಂದು ಸಭೆ ನಡೆಸಲಾಗಿದೆ. ಮತ್ತೊಂದು ಸಭೆ ಕರೆಯಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.