ಬೆಂಗಳೂರು: ಕೋವಿಡ್ ಬಿಕ್ಕಟ್ಟಿನ ನಡುವೆಯೇ ನಡೆದ 2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಯಶಸ್ಸಿಗೆ ಸಂಬಂಧಿಸಿದಂತೆ ಹೊರತಂದ ‘ಯಶೋಗಾಥೆ’ ಸಂಚಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬಿಡುಗಡೆ ಮಾಡಿದರು.
ಸಮಗ್ರ ಶಿಕ್ಷಣ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕೊರೊನಾದಂಥ ವಿಷಮ ಕಾಲಘಟ್ಟ ಎದುರಾದರೆ ಹೇಗೆ ಪರೀಕ್ಷೆ ನಡೆಸಬಹುದೆಂಬುದಕ್ಕೆ ಇದು ಮಾರ್ಗದರ್ಶಿ’ ಎಂದರು.
ಇದೇ ಸಂದರ್ಭದಲ್ಲಿ ಅವರು, ಕೋವಿಡ್ ಕಾರಣದಿಂದ ಮಕ್ಕಳ ಸುರಕ್ಷತೆ ಮತ್ತು ಪರೀಕ್ಷಾ ಪಾರದರ್ಶಕತೆ ಕಾಪಾಡಿಕೊಂಡು ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಾಕ್ಷ್ಯಚಿತ್ರ ‘ವಿದ್ಯಾ ಸಂಜೀವಿನಿ’ ಬಿಡುಗಡೆ ಮಾಡಿದರು. ಅಲ್ಲದೆ, ಮೂರು ವರ್ಷಗಳಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿ ಡಿಜಿಟಲ್ ಪ್ರಕ್ರಿಯೆಗೆ ತೆರೆದುಕೊಂಡಿರುವುದನ್ನು ಅನಾವರಣಗೊಳಿಸುವ ‘ಡಿಜಿಟಲ್ ಕ್ರಾಂತಿಕಿರಣ’ ಸಾಕ್ಷ್ಯಚಿತ್ರ ಮತ್ತು 2020ರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದ ವಿಶ್ಲೇಷಣೆಯ ವಿವರಗಳನ್ನು ಒಳಗೊಂಡ ಫಲಿತಾಂಶ ವಿಶ್ಲೇಷಣೆ ಮತ್ತು ಮುಂದಿನ ವರ್ಷದ ಕ್ರಿಯಾ ಯೋಜನೆ ವಿವರಗಳ ‘ಅನಾವರಣ’ ಸಂಚಿಕೆಯನ್ನೂ ಬಿಡುಗಡೆ ಮಾಡಿದರು.
ಕಡತ ವಿಲೇವಾರಿ: ‘ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕಡತಗಳು ದೂಳು ತಿನ್ನುತ್ತಿವೆ’ ಎಂಬ ಶಾಲಾ ಆಡಳಿತ ಮಂಡಳಿಗಳು ಆರೋಪಿಸುತ್ತಿವೆ. ಅದನ್ನು ತಡೆಯಲು ಮಾರ್ಚ್ ಒಂದರಿಂದ ವಿಭಾಗ ಮಟ್ಟ ಮತ್ತು ನಂತರ ಜಿಲ್ಲಾ ಮಟ್ಟದಲ್ಲಿ ಕಡತ ವಿಲೇವಾರಿ ಆಂದೋಲನ ನಡೆಸಲಾಗುವುದು’ ಎಂದು ಸಚಿವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.