ಮಡಿಕೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನವು ಜುಲೈ 13ರಿಂದ ಒಂದು ವಾರ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ತಿಳಿಸಿದ್ದಾರೆ.
ಜಿಲ್ಲೆಯ ಆರು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದ್ದು, 6 ಮಂದಿ ಜಂಟಿ ಮೌಲ್ಯಮಾಪಕರು, 6 ಮಂದಿ ವ್ಯವಸ್ಥಾಪಕರು, 74 ಮಂದಿ ಮುಖ್ಯ ಮೌಲ್ಯಮಾಪಕರು ಸೇರಿದಂತೆ 650 ಮಂದಿ ಮೌಲ್ಯಮಾಪಕರನ್ನು ನಿಯೋಜಿಸಲಾಗಿದೆ ಎಂದು ಮಚ್ಚಾಡೋ ತಿಳಿಸಿದ್ದಾರೆ.
ಮೌಲ್ಯಮಾಪನ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಶಿಕ್ಷಕರು ಸೇರಿದಂತೆ ಎಲ್ಲರ ಸಹಕಾರದಿಂದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಕೋವಿಡ್-19 ರ ಸಂದರ್ಭದಲ್ಲೂ ಪೂರ್ಣಗೊಳಿಸಲಾಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವೇ ಮುಂದಿನ ಹಂತವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಪ್ರತಿಮ ಧೈರ್ಯದಿಂದ ಒಳ್ಳೆಯ ಹಾಜರಾತಿ ಪಡೆದಿದ್ದೇವೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಕೆಲವು ವಿನಾಯಿತಿಗಳನ್ನು ಸಹಾಯಕ ಮೌಲ್ಯಮಾಪಕರಿಗೆ ನೀಡಿದ್ದರೂ ಅದನ್ನು ನೆಪವಾಗಿಸದೆ, ಎಲ್ಲರೂ ಮೌಲ್ಯಮಾಪನ ಕಾರ್ಯದಲ್ಲಿ ಧೈರ್ಯವಾಗಿ ಭಾಗಿಯಾಗುವಂತೆ ಅವರು ತಿಳಿಸಿದ್ದಾರೆ.
ಅಂತರ ಕಾಯ್ದುಕೊಂಡು, ಸುರಕ್ಷತೆಗೆ ಆದ್ಯತೆ ನೀಡಿ ಮೌಲ್ಯಮಾಪನ ಕಾರ್ಯದಲ್ಲಿ ಅನುಪಾಲನೆಯೊಂದಿಗೆ ಪಾಲ್ಗೊಳ್ಳಬೇಕಿದೆ. ಮೌಲ್ಯಮಾಪನ ಕಾರ್ಯದಲ್ಲಿ ತೋರುವ ಸಕ್ರಿಯತೆಯು ಕೋವಿಡ್ 19 ಒಡ್ಡಿರುವ ಸವಾಲಿಗೆ ಉತ್ತರವಾಗಿ ನಿಲ್ಲಲಿ. ಮೌಲ್ಯಮಾಪನದ ಕಾರ್ಯ ಕೈಗೊಂಡು ಇಲಾಖೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯವಿದೆ. ಜುಲೈ 13ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನದಲ್ಲಿ ಹಾಜರಾಗಬೇಕೆಂದು ಕೋರಿದ್ದಾರೆ.
ಪರೀಕ್ಷೆ ವೇಳೆ ಸಾವಿರಾರು ಮಕ್ಕಳಿಗೆ ಶಿಕ್ಷಕರು ಧೈರ್ಯ ತುಂಬಿದ್ದಾರೆ. ಮೌಲ್ಯಮಾಪನ ಕಾರ್ಯದಲ್ಲೂ ಪಾಲ್ಗೊಂಡು ಮಕ್ಕಳು ತೋರಿದ ಧೈರ್ಯಕ್ಕೆ, ವಿಶ್ವಾಸಕ್ಕೆ ಗೌರವ ತೋರಿಸಬೇಕಿದೆ
ಪಿ.ಎಸ್.ಮಚ್ಚಾಡೋ,
ಡಿಡಿಪಿಐ, ಶಿಕ್ಷಣ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.