ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ರಾಜೇಶ್ ನಂಬಿಯಾರ್, ಇಲಾಖೆ ಉಪ ಕಾರ್ಯದರ್ಶಿ ದಲಜೀತ್ ಕುಮಾರ್ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಬೌದ್ಧಿಕ ಹಕ್ಕು ಸ್ವತ್ತುಗಳ ಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಾಸ್ಕಾಂ, ಕರ್ನಾಟಕ ನಾವೀನ್ಯ ಮತ್ತು ತಂತ್ರಜ್ಞಾನ ಸೊಸೈಟಿ (ಕೈಟ್ಸ್) ಹಾಗೂ ರಾಜ್ಯ ಸರ್ಕಾರವು ಒಪ್ಪಂದ ಮಾಡಿಕೊಂಡಿವೆ.
ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ನಾಸ್ಕಾಂ ಅಧ್ಯಕ್ಷ ರಾಜೇಶ್ ನಂಬಿಯಾರ್ ಅವರು, ‘ಬೌದ್ಧಿಕ ಹಕ್ಕು ಉತ್ತೇಜನಾ ಕಾರ್ಯಕ್ರಮ’ದ ಒಪ್ಪಂದ ಪತ್ರಕ್ಕೆ ಸಹಿ ಮಾಡಿದರು.
ಬೌದ್ಧಿಕ ಹಕ್ಕು ಪಡೆಯುವುದರ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಅಗತ್ಯವಿರುವ ಪ್ರಯೋಗಾಲಯ ಮತ್ತು ಅಧ್ಯಯನ ಸವಲತ್ತು ಒದಗಿಸುವುದು, ಬೌದ್ಧಿಕ ಹಕ್ಕಿಗಾಗಿ ಅರ್ಜಿ ಸಲ್ಲಿಸುವಲ್ಲಿ ನೆರವು ನೀಡುವುದು, ಈ ಎಲ್ಲ ಕೆಲಸಗಳಿಗೆ ನೀತಿರೂಪಣೆ ಮಟ್ಟದಲ್ಲಿ ಅಗತ್ಯವಿರುವ ನೆರವು ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಾಗಿವೆ.
ರಾಜೇಶ್ ನಂಬಿಯಾರ್, ‘ರಾಜ್ಯ ಸರ್ಕಾರದೊಂದಿಗಿನ ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತೀಯರ ಬೌದ್ಧಿಕ ಹಕ್ಕುಗಳ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಇದು ಕರ್ನಾಟಕ ಮಾತ್ರವಲ್ಲದೆ, ಭಾರತಕ್ಕೂ ಜಾಗತಿಕ ಮಟ್ಟದಲ್ಲಿ ಮಹತ್ವದ ಸ್ಥಾನ ತಂದುಕೊಡಲಿದೆ’ ಎಂದರು.
ಪ್ರಿಯಾಂಕ್ ಖರ್ಗೆ, ‘ಉದ್ಯಮ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಅಗತ್ಯವಿರುವ ಸವಲತ್ತು ಮತ್ತು ನೆರವನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರವು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸದಾ ನಿಲ್ಲಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.