ಹೊಸಪೇಟೆ: ಸಿ.ವಿ.ಎಲ್. ಶಾಸ್ತ್ರಿ ಸ್ಮರಣಾರ್ಥ ರಾಜ್ಯಮಟ್ಟದ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ ಇದೇ 11ರಿಂದ 13ರ ವರೆಗೆ ನಗರದಲ್ಲಿ ನಡೆಯಲಿದೆ.
ಬಳ್ಳಾರಿ ಜಿಲ್ಲಾ ಟೇಬಲ್ ಟೆನಿಸ್ ಸಂಘ ಹಾಗೂ ‘ಸ್ಕೈಟಾಪ್’ ಸಹಭಾಗಿತ್ವದಲ್ಲಿ ಚಾಂಪಿಯನ್ಷಿಪ್ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಸಿ. ಗುಣಲನ್, ‘ಮೂರು ದಿನಗಳ ವರೆಗೆ ನಡೆಯಲಿರುವ ಚಾಂಪಿಯನ್ಷಿಪ್ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 400ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳುವರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಭಾಗವಹಿಸುವರು’ ಎಂದು ಮಾಹಿತಿ ನೀಡಿದರು.
‘ಕೆಡೆಟ್ ಬಾಲಕ/ಬಾಲಕಿಯರು, ಸಬ್ ಜೂನಿಯರ್ ಬಾಲಕ/ಬಾಲಕಿಯರು, ಜೂನಿಯರ್ ಬಾಲಕ/ಬಾಲಕಿಯರು, ಯುತ್ ಹಾಗೂ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಪ್ರತ್ಯೇಕ ಪಂದ್ಯಗಳು ನಡೆಯಲಿವೆ. ಇದೇ ‘11ರಂದು ಬೆಳಿಗ್ಗೆ 11ಕ್ಕೆ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ನಾಗಮೋಹನ್ ಚಾಲನೆ ಕೊಡುವರು. ಟೇಬಲ್ ಟೆನಿಸ್ ರಾಷ್ಟ್ರೀಯ ಚಾಂಪಿಯನ್ ಶರತ್ ಕಮಲ್, ಅರ್ಚನಾ ಕಾಮತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. 13ರಂದು ಸಂಜೆ 7ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಕೆ.ಟಿ.ಟಿ.ಎ. ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸುವರು’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.