ಹೊಸಪೇಟೆ: ‘ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ಆ. 29ರಿಂದ 31ರ ವರೆಗೆ ನಗರದ ತುಂಗಭದ್ರಾ ರಿಕ್ರಿಯೇಷನ್ ಕ್ಲಬ್ನಲ್ಲಿ ಜರುಗಲಿದೆ’ ಎಂದು ಬಳ್ಳಾರಿ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಶನ್ ಕಾರ್ಯದರ್ಶಿ ಸಿ. ಗುಣಲನ್ ತಿಳಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ. 29ರಂದು ಪುರುಷ ಮತ್ತು ಮಹಿಳೆಯರ ಹಿರಿಯರ ವಿಭಾಗ, ಯುತ್ ವಿಭಾಗದ ಪಂದ್ಯಗಳು ನಡೆದರೆ, ಆ. 30ರಂದು ಯುತ್ ಬಾಯ್ಸ್ ಹಾಗೂ ಯುತ್ ಗರ್ಲ್ಸ್, ಜೂನಿಯರ್, ಸಬ್ ಜೂನಿಯರ್ ವಿಭಾಗದ ಪಂದ್ಯಗಳು, ಆ. 31ರಂದು ಸಬ್ ಜೂನಿಯರ್ ಹಾಗೂ ಕೆಡೆಟ್ ವಿಭಾಗ ಪಂದ್ಯಗಳು ನಡೆಯಲಿವೆ. ಎಲ್ಲ ವಿಭಾಗದ ಅಂತಿಮ ಹಂತದ ಪಂದ್ಯಗಳು ಆಯಾ ದಿನದಂದೇ ಜರುಗಲಿವೆ’ ಎಂದು ಮಾಹಿತಿ ನೀಡಿದರು.
‘ಈಗಾಗಲೇ ಆನ್ಲೈನ್ ಮೂಲಕ 306 ಜನ ಪಂದ್ಯಾವಳಿಗೆ ಹೆಸರು ನೋಂದಣಿ ಮಾಡಿಸಿದ್ದಾರೆ. ಒಟ್ಟು ₹1.30 ಲಕ್ಷ ನಗದು ಬಹುಮಾನ ಇಡಲಾಗಿದೆ. ನಿತ್ಯ ಒಂದು ಪಂದ್ಯವನ್ನು ಆನ್ಲೈನ್ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಆಸಕ್ತರು tt1 ವೆಬ್ಸೈಟಿಗೆ ಭೇಟಿ ಕೊಟ್ಟು ಪಂದ್ಯ ವೀಕ್ಷಿಸಬಹುದು’ ಎಂದು ವಿವರಿಸಿದರು.
‘ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸುವರು. ಸ್ಥಳೀಯ ಸೇರಿದಂತೆ ರಾಜ್ಯದ ಯಾವುದೇ ಭಾಗದವರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು. ಅಸೋಸಿಯೇಶನ್ ಸದಸ್ಯ ವಿಜಯಕುಮಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.