ADVERTISEMENT

ಅನ್ವೇಷಣಾ ಪ್ರಾಧಿಕಾರ, ವಿಷನ್‌ ಗ್ರೂಪ್‌ ರಚನೆ

ಸ್ಟಾರ್ಟ್ಅಪ್‌ಗಳಿಗಾಗಿ ರಾಜ್ಯ ಸರ್ಕಾರದ ಯೋಜನೆ, ನ.18ರಿಂದ ಬೆಂಗಳೂರ ತಂತ್ರಜ್ಞಾನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 5:40 IST
Last Updated 20 ಸೆಪ್ಟೆಂಬರ್ 2019, 5:40 IST
ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಸಂವಾದದಲ್ಲಿ ಪಾಲ್ಗೊಂಡರು.
ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಸಂವಾದದಲ್ಲಿ ಪಾಲ್ಗೊಂಡರು.   

ಬೆಂಗಳೂರು: ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ), ಜೈವಿಕ ತಂತ್ರಜ್ಞಾನ (ಬಿಟಿ) ಸ್ಟಾರ್ಟ್‌ಅಪ್‌ಗಳನ್ನು ಸ್ಥಾಪಿಸಲು ಮತ್ತು ಬಂಡವಾಳ ಆಕರ್ಷಿಸಲು ಕರ್ನಾಟಕ ಅನ್ವೇಷಣಾ ಪ್ರಾಧಿಕಾರ ಹಾಗೂವಿಷನ್‌ ಗ್ರೂಪ್‌ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದರು.

ಇಲ್ಲಿ ಗುರುವಾರ ಐಟಿ, ಬಿಟಿ ಉದ್ಯಮಗಳ ಪ್ರಮುಖರರೊಂದಿಗೆ ಸಂವಾದ ನಡೆಸಿದ ಅವರು, ಸ್ಟಾರ್ಟ್‌ಅಪ್‌ ವ್ಯವಸ್ಥೆಗಳು ಇರುವಂತಹ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ, ಬೆಳಗಾವಿಯಂತಹ ನಗರಗಳಲ್ಲಿ ಉದ್ಯಮಿಗಳು ಹೂಡಿಕೆ ಮಾಡಬೇಕು. ಅದಕ್ಕಾಗಿಸರ್ಕಾರ ಶೀಘ್ರ ಮಾಹಿತಿ ತಂತ್ರಜ್ಞಾನ ನೀತಿ ಪ್ರಕಟಿಸಲಿದೆ ಎಂದರು. ಸಂವಾದದಲ್ಲಿ 15ಕ್ಕೂ ಅಧಿಕ ದೇಶಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕರೂ ಇದ್ದರು.

ಶೇ 40ರಷ್ಟು ಪಾಲು:‘₹ 5 ಲಕ್ಷ ಕೋಟಿ (ಟ್ರಿಲಿಯನ್‌) ಆರ್ಥಿಕತೆಯನ್ನು ಸಾಧಿಸಲು ಹೊರಟಿರುವ ಭಾರತದಲ್ಲಿ ಡಿಜಿಟಲ್‌ ಜಗತ್ತಿನಿಂದ ಶೇ 20ರಷ್ಟು ಅಂದರೆ ₹ 1 ಟ್ರಿಲಿಯನ್‌ ಆರ್ಥಿಕತೆ ಸೃಷ್ಟಿಯಾಗುವ ಗುರಿ ಇದೆ. ಇದರಲ್ಲಿ ರಾಜ್ಯದ ಪಾಲು ಶೇ 40ರಷ್ಟು ಇರಬೇಕು ಎಂಬ ಗುರಿಯೊಂದಿಗೆ ಐಟಿ, ಬಿಟಿ ಉದ್ದಿಮೆಗಳಿಗೆ ಉತ್ತೇಜನ ನೀಡುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದೇ ಉದ್ದೇಶದೊಂದಿಗೆ ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಾ. ಸಿ. ಎನ್‌. ಅಶ್ವತ್ಥನಾರಾಯಣ ಹೇಳಿದರು.

ADVERTISEMENT

‘ನವೀನ ಅನ್ವೇಷಣೆಗಾಗಿ ರಾಜ್ಯ ಸರ್ಕಾರ ಕಾನೂನು ಚೌಕಟ್ಟು ರೂಪಿಸಲಿದ್ದು, 2 ಮತ್ತು 3ನೇ ಹಂತದ ನರಗಳಲ್ಲಿ ವಿಶ್ವವಿದ್ಯಾಲಯಗಳನ್ನು ತೊಡಗಿಸುವ ಮೂಲಕ ನವ ಯುಗದ ಅನ್ವೇಷಣಾ ಜಾಲವನ್ನು (ಎನ್‌ಎಐಎಸ್‌) ರಚಿಸಿಕೊಳ್ಳಲಿದೆ. ಒಟ್ಟು 30 ಎಂಜಿನಿಯರಿಂಗ್‌ ಕಾಲೇಜುಗಳನ್ನು 293 ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು, 100ಕ್ಕೂ ಅಧಿಕ ಮಾದರಿಗಳನ್ನು ತಯಾರಿಸಲಾಗಿದೆ’ ಎಂದರು.

ತಂತ್ರಜ್ಞಾನ ಸಮಾವೇಶ: ನವೆಂಬರ್‌ 18ರಿಂದ 20ರವರೆಗೆ 22ನೇ ಬೆಂಗಳೂರು ತಂತ್ರಜ್ಞಾನ ಸಮಾವೇಶ (ಬಿಟಿಎಸ್‌) ನಡೆಯಲಿದ್ದು, ಸ್ಟಾರ್ಟ್ಅಪ್‌ಗಳು ಮತ್ತು ಅನ್ವೇಷಣೆಗಳಿಗೆ ಈ ಬಾರಿ ವಿಶೇಷ ಗಮನ ಹರಿಸಲಾಗುವುದು. ಜತೆಗೆ ‘ಇಂಡಿಯಾ ಬಯೊ 2019’ ಸಮಾವೇಶವೂ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ. ವಿ. ರಮಣ ರೆಡ್ಡಿ, ಐಟಿ ವಿಷನ್‌ ಗ್ರೂಪ್‌ನ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ, ಬಿಟಿ ವಿಷನ್‌ ಗ್ರೂಪ್‌ನ ಅಧ್ಯಕ್ಷೆ ಡಾ. ಕಿರಣ್‌ ಮಜುಂದಾರ್‌ ಷಾ ಇದ್ದರು.

ಇದೇ ವೇಳೆ ಕಿಯೋನಿಕ್ಸ್‌ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 1 ಕೋಟಿ ನೀಡಲಾಯಿತು.‌

ಶೇ 40ರಷ್ಟುಕನ್ನಡಿಗರಿಗೆ ಉದ್ಯೋಗ

ರಾಜ್ಯದ ಐಟಿ, ಬಿಟಿ ಉದ್ಯಮ ಕ್ಷೇತ್ರದಲ್ಲಿ ಶೇ 40ರಷ್ಟು ಕನ್ನಡಿಗರಿದ್ದಾರೆ. ಈ‍ಪ್ರಮಾಣ ಇನ್ನಷ್ಟು ಹೆಚ್ಚಬೇಕಾದರೆ ನಮ್ಮ ಯುವಜನತೆ ಕೌಶಲವನ್ನು ವೃದ್ಧಿಸುವ ಪ್ರಯತ್ನವೂ ನಡೆಯಬೇಕಾಗಿದೆ. ಇದಕ್ಕಾಗಿ ಸರ್ಕಾರ ನವ ಯುಗದ ಅನ್ವೇಷಣಾ ಜಾಲ (ಎನ್‌ಎಐಎನ್‌) ಕಾರ್ಯಕ್ರಮದ ಮೂಲಕ ಎಂಜಿನಿಯರಿಂಗ್‌ ಕಾಲೇಜುಗಳಿಂದಲೇ ಕೆಲಸಕ್ಕೆ ಯೋಗ್ಯರಾಗುವಂತಹ ಉದ್ಯೋಗಿಗಳನ್ನು ಸಿದ್ಧಪಡಿಸುವ ಯೋಜನೆ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ. ಎನ್‌. ಅಶ್ವತ್ಥನಾರಾಯಣ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.