ADVERTISEMENT

ಮಕ್ಕಳನ್ನು ಹೊರಗೆ ನಿಲ್ಲಿಸಿದ ಪ್ರಕರಣ; ಕ್ಷಮೆ ಕೇಳಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2018, 16:20 IST
Last Updated 3 ಆಗಸ್ಟ್ 2018, 16:20 IST

ಕುಣಿಗಲ್: ‘ಶುಲ್ಕ ಪಾವತಿಸದ ಕಾರಣಕ್ಕೆ ಗುರುವಾರ ಮಕ್ಕಳನ್ನು ಶಾಲೆಯಿಂದ ಹೊರಗಡೆ ನಿಲ್ಲಿಸಿದ್ದ ಶಿಕ್ಷಕರು ಶುಕ್ರವಾರ ಪೋಷಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಕ್ಷಮೆ ಕೋರಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಕೊಟ್ಟಿದ್ದಾರೆ’ ಎಂದುಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಟಿ.ಜಿ.ಸಿದ್ದಯ್ಯ ತಿಳಿಸಿದ್ದಾರೆ.

ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಸಂತೆಪೇಟೆಯ ಎಸ್‌ಎನ್‌ಎಸ್ ಹಿರಿಯ ಆಂಗ್ಲ ಮಾಧ್ಯಮ ಖಾಸಗಿ ಶಾಲೆಯ ನಾಲ್ಕು ವಿದ್ಯಾರ್ಥಿಗಳನ್ನು ಶುಲ್ಕ ಪಾವತಿಸದ ಕಾರಣ ಶಿಕ್ಷಕರು ಗುರುವಾರ ಕೊಠಡಿಯಿಂದ ಹೊರಗಡೆ ನಿಲ್ಲಿಸಿದ್ದರು. ಈ ಕುರಿತು ಪ್ರಜಾವಾಣಿಯ ಶುಕ್ರವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯು ಪ್ರಕರಣ ಕುರಿತು ವರದಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶುಕ್ರವಾರ ಸೂಚಿಸಿತ್ತು.

‘ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಹನುಮೇಗೌಡ ಅವರನ್ನು ಶಾಲೆಗೆ ಕಳಿಸಿ ವರದಿ ಪಡೆಯಲಾಗಿದೆ. ಮುಖ್ಯಶಿಕ್ಷಕ ಲೋಕೇಶ್ ಮತ್ತು ಶಿಕ್ಷಕಿ ಸುಮಿತ್ರಾ ಅವರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ’ ಎಂದು ಸಿದ್ದಯ್ಯ ಹೇಳಿದ್ದಾರೆ.

ADVERTISEMENT

‘ತಾವು ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸಿರಲಿಲ್ಲ. ಶುಲ್ಕ ಪಾವತಿಸಲು ಮಾತ್ರ ಪೋಷಕರಿಗೆ ಸೂಚಿಸಿದ್ದಾಗಿ ಶಿಕ್ಷಕರು ವಿಚಾರಣೆ ವೇಳೆ ಹೇಳಿದ್ದಾರೆ. ಆದಾಗ್ಯೂ ಅವರಿಗೆ ಷೋಕಾಸ್ ನೋಟಿಸ್ ನೀಡಲಾಗುವುದು. ಉತ್ತರ ಬಂದ ಬಳಿಕ ಆಯುಕ್ತರ ಕಚೇರಿಗೆ ವರದಿ ಸಲ್ಲಿಸಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.