ADVERTISEMENT

ಉಪ ನಗರ ರೈಲು ವಿಸ್ತರಣೆ: ನೈರುತ್ಯ ರೈಲ್ವೆಗೆ ಪತ್ರ: ಎಂ.ಬಿ. ಪಾಟೀಲ

ಕಾರ್ಯಸಾಧ್ಯತಾ ವರದಿ ಕೈಗೆತ್ತಿಕೊಳ್ಳಲು ಅನುಮತಿ ಕೋರಿ ಪತ್ರ– ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 16:29 IST
Last Updated 24 ಜುಲೈ 2023, 16:29 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ಉಪನಗರ ರೈಲು ಯೋಜನೆಯನ್ನು ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಾಗಡಿ, ಗೌರಿಬಿದನೂರು, ಬಂಗಾರಪೇಟೆಗೆ ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯಸಾಧ್ಯತಾ ವರದಿ ಕೈಗೆತ್ತಿಕೊಳ್ಳಲು ಅನುಮತಿ ನೀಡುವಂತೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಉಪನಗರ ರೈಲು ಯೋಜನೆಯ ಪ್ರಗತಿ ಕುರಿತು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತದ (ಕೆ-ರೈಡ್‌) ಅಧಿಕಾರಿಗಳ ಜೊತೆ ಸೋಮವಾರ ಅವರು ಸಭೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಅವರು, ‘ರಾಜಧಾನಿಯಲ್ಲಿನ ಸಂಚಾರ ದಟ್ಟಣೆ ನಿವಾರಣೆ ಗುರಿಯೊಂದಿಗೆ ಕೈಗೆತ್ತಿಕೊಂಡಿರುವ ಉಪ ನಗರ ರೈಲು ಯೋಜನೆಯ ಹಂತ-1ರಲ್ಲಿ 148.17 ಕಿ.ಮೀ. ಕಾಮಗಾರಿ ನಡೆಯುತ್ತಿದೆ. ಅದನ್ನು ಸುತ್ತಲಿನ ಹಲವು ನಗರಗಳಿಗೆ ವಿಸ್ತರಿಸುವ ಅಗತ್ಯವಿದೆ. ಈ ಸಂಬಂಧ ಜೂನ್‌ 6ರಂದು ಸಭೆ ನಡೆಸಲಾಗಿತ್ತು. ಕೆ-ರೈಡ್‌ ಈ ಪ್ರಸ್ತಾವನೆಗೆ ಅಂದು ತಾತ್ವಿಕ ಒಪ್ಪಿಗೆ ನೀಡಲಾಗಿತ್ತು’ ಎಂದರು.

ADVERTISEMENT

ಉಪನಗರ ರೈಲು ವಿಸ್ತರಣೆಯ ಚಿತ್ರಣ: ಪ್ರಗತಿಯಲ್ಲಿರುವ 148 ಕಿ.ಮೀ. ವ್ಯಾಪ್ತಿಯ ಉಪ ನಗರ ರೈಲು ಯೋಜನೆಯಲ್ಲಿ, ಬೆಂಗಳೂರು ನಗರ ರೈಲು ನಿಲ್ದಾಣ– ದೇವನಹಳ್ಳಿ (41.4 ಕಿ.ಮೀ), ಬೈಯಪ್ಪನಹಳ್ಳಿ– ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿ– ವೈಟ್‌ಫೀಲ್ಡ್‌ (35.32 ಕಿ.ಮೀ) ಮತ್ತು ಹೀಳಲಿಗೆ– ರಾಜಾನುಕುಂಟೆ (46.25 ಕಿ.ಮೀ) ಹೀಗೆ ನಾಲ್ಕು ಕಾರಿಡಾರ್‌ಗಳಿವೆ. ಎರಡನೇ ಹಂತದಲ್ಲಿ ದೇವನಹಳ್ಳಿ– ಕೋಲಾರ (107 ಕಿ.ಮೀ), ಚಿಕ್ಕಬಾಣಾವರದಿಂದ ಡಾಬಸ್‌ಪೇಟೆ ಮೂಲಕ ತುಮಕೂರು (55 ಕಿ.ಮೀ), ಚಿಕ್ಕಬಾಣಾವರ– ಮಾಗಡಿ (45 ಕಿ.ಮೀ), ಕೆಂಗೇರಿ–ಮೈಸೂರು (125 ಕಿ.ಮೀ), ವೈಟ್‌ಫೀಲ್ಡ್‌– ಬಂಗಾರಪೇಟೆ (45 ಕಿ.ಮೀ), ಹೀಳಲಿಗೆಯಿಂದ ತಮಿಳುನಾಡಿನ ಹೊಸೂರು (23 ಕಿ.ಮೀ) ಮತ್ತು ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರದ ಮಾರ್ಗವಾಗಿ ಗೌರಿಬಿದನೂರಿನವರೆಗೆ (52 ಕಿ.ಮೀ) ವಿಸ್ತರಿಸಲು ಎಂ.ಬಿ. ಪಾಟೀಲ ಚಿಂತನೆ ನಡೆಸಿದ್ದಾರೆ.

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.