ADVERTISEMENT

ಹೈಕೋರ್ಟ್‌ನಲ್ಲಿ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 18:27 IST
Last Updated 3 ಏಪ್ರಿಲ್ 2024, 18:27 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಕೋರ್ಟ್‌ ಹಾಲ್‌ನ ಸಂಖ್ಯೆ–1ರಲ್ಲಿ ಬುಧವಾರ ಮಧ್ಯಾಹ್ನ ಮೈಸೂರಿನ ಚಿನ್ನಂ ಶ್ರೀನಿವಾಸ್‌ (51) ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಚ್.ಪಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠ ದೈನಂದಿನ ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು. ಮಧ್ಯಾಹ್ನ 1.15ರ ಸಮಯದಲ್ಲಿ ಕ್ರಮ ಸಂಖ್ಯೆ–26ರ ಪ್ರಕರಣವನ್ನು ಕೋರ್ಟ್ ಅಧಿಕಾರಿ ಕೂಗುತ್ತಿದ್ದಂತೆಯೇ ಮೈಸೂರಿನ ವಿಜಯನಗರದ ನಿವಾಸಿ ಶ್ರೀನಿವಾಸ್‌, ನ್ಯಾಯಪೀಠದ ಎದುರು ಹಾಜರಾದರು. ತಕ್ಷಣವೇ ಅವರು ತಂದಿದ್ದ ಬ್ಲೇಡ್‌ನಿಂದ ತಮ್ಮ ಕತ್ತು ಕೊಯ್ದುಕೊಂಡರು’ ಎಂದು ಮೂಲಗಳು ತಿಳಿಸಿವೆ.

‘ಶ್ರೀನಿವಾಸ್‌ ಅವರು ದಾಖಲೆಗಳ ಮಧ್ಯದಲ್ಲಿ ಬ್ಲೇಡ್‌ ಇಟ್ಟುಕೊಂಡು ಹೈಕೋರ್ಟ್‌ ಒಳಕ್ಕೆ ಬಂದಿದ್ದರು’ ಎಂದು ಮೂಲಗಳು ಹೇಳಿವೆ.

ADVERTISEMENT

‘ಮೈಸೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿ ಲಾಭ ಹಂಚಿಕೊಳ್ಳುವ ಸಂಬಂಧ ವ್ಯಕ್ತಿಯೊಬ್ಬರ ಜತೆಗೆ ಶ್ರೀನಿವಾಸ್‌ ‌ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಆ ವ್ಯಕ್ತಿ ಲಕ್ಷಾಂತರ ರೂಪಾಯಿ ವಂಚಿಸಿದ್ದು, ಪ್ರಕರಣ ದಾಖಲಾಗಿತ್ತು. ಅದನ್ನು ಪ್ರಶ್ನಿಸಿ ಆ ವ್ಯಕ್ತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಿವಿಲ್‌ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಹೈಕೋರ್ಟ್‌ ಸೂಚಿಸಿತ್ತು. ಈ ಪ್ರಕರಣದ ವಿಚಾರವನ್ನು ದಾಖಲೆಗಳ ಸಹಿತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗಳ ಗಮನಕ್ಕೆ ತರಲು ಶ್ರೀನಿವಾಸ್‌ ಬುಧವಾರ ಬಂದಿದ್ದರು.

‘ಬಿಗಿ ಭದ್ರತೆ ಇದ್ದರೂ ಬ್ಲೇಡ್‌ ಜೊತೆಗೆ ವ್ಯಕ್ತಿ ಹೈಕೋರ್ಟ್‌ ಒಳಗೆ ಹೇಗೆ ಪ್ರವೇಶಿಸಿದರು?’ ಎಂದು ನ್ಯಾ. ಪ್ರಭಾಕರ ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.