ADVERTISEMENT

ಎಸ್.ಎಂ. ಕೃಷ್ಣ ಆಶೀರ್ವಾದ ಪಡೆದ ಸುಮಲತಾ!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 20:12 IST
Last Updated 15 ಮಾರ್ಚ್ 2019, 20:12 IST
   

ಬೆಂಗಳೂರು: ಮಂಡ್ಯದಿಂದ ಕಣಕ್ಕಿಳಿಯಲು ನಿರ್ಧರಿಸಿರುವ ಸುಮಲತಾ ಅಂಬರೀಷ್‌, ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರನ್ನು ಶುಕ್ರವಾರ ಭೇಟಿ ಮಾಡಿ ‘ರಾಜಕೀಯ’ ಆಶೀರ್ವಾದ ಪಡೆದರು.

ಸದಾಶಿವನಗರದಲ್ಲಿರುವ ಕೃಷ್ಣ ಅವರ ನಿವಾಸಕ್ಕೆ ತೆರಳಿದ ಸುಮಲತಾ, ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ತಮ್ಮ ಪರ ಪ್ರಚಾರ ನಡೆಸುವಂತೆ ಮನವಿ ಮಾಡಿದರು.

‘ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಬೇಕೆಂಬ ಕಾರಣಕ್ಕೆ ನಾನು ಸ್ಪರ್ಧಿಸುತ್ತಿಲ್ಲ. ಮಂಡ್ಯ ಜನರ ಪ್ರೀತಿಗೆ ಕಟ್ಟು ಬಿದ್ದು ಕಣಕ್ಕಿಳಿಯುತ್ತಿದ್ದೇನೆ. ನನಗೆ ಯಾವುದೇ ಪಕ್ಷದ, ನಾಯಕರ ಬೆಂಬಲ ಇಲ್ಲ. ನಿಮ್ಮ ನೈತಿಕ ಬಲವೇ ನನಗೆ ಶ್ರೀರಕ್ಷೆ’ ಎಂದರು.

ADVERTISEMENT

ಭೇಟಿ ಬಳಿಕ ಮಾತನಾಡಿದ ಸುಮಲತಾ, ‘ಕೃಷ್ಣ ಅವರು ಹಿರಿಯರು. ಅವರ ಆಶೀರ್ವಾದ ಪಡೆದಿದ್ದೇನೆ. ಜಿಲ್ಲೆಯ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿದ್ದೇನೆ. ಅವರು ಸಹಕರಿಸುವ ವಿಶ್ವಾಸವಿದೆ’ ಎಂದರು.

ಸುಮಲತಾ ಅವರಿಗೆ ಬೆಂಬಲ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣ, ‘ನಾನು ಬೇರೆಯಲ್ಲ, ಬಿಜೆಪಿ ಬೇರೆಯಲ್ಲ. ಬಿಜೆಪಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೊ ಅದು ನನ್ನದೂ ಕೂಡ’ ಎಂದರು.

‘ಚುನಾವಣಾ ಪ್ರಚಾರದಲ್ಲಿ ಯಾರೂ ಕೂಡ ವೈಯಕ್ತಿಕ ವಿಷಯಗಳನ್ನು ಚರ್ಚೆ ಮಾಡಬಾರದು. ಈ ಮಾತನ್ನು ಸುಮಲತಾ ಕೂಡಾ ಹೇಳಿದ್ದಾರೆ. ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.