ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ರಾಜ್ಯ ಪೊಲೀಸ್ ಇಲಾಖೆಯು ‘ಸುರಕ್ಷಾ’ ಎಂಬ ಮೊಬೈಲ್ ಆಪ್ ಪರಿಚಯಿಸಿದ್ದು, 112 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಅಥವಾ ಸುರಕ್ಷಾ ಆ್ಯಪ್ ಮೂಲಕ ನೆರವು ಪಡೆದುಕೊಳ್ಳಬಹುದಾದ ವ್ಯವಸ್ಥೆ ರೂಪಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
‘ಅಪಘಾತ ಹಾಗೂ ಮತ್ತಾವುದೇ ಅವಘಡ ಉಂಟಾದ ಸಂದರ್ಭಗಳಲ್ಲಿ ಪೊಲೀಸ್ ಇಲ್ಲವೇ ಅಗತ್ಯ ತುರ್ತು ಸೇವೆಗಳ ಸೌಲಭ್ಯ ಪಡೆಯಲು ಸಿದ್ಧಪಡಿಸಲಾಗಿರುವ 112ರ ತುರ್ತು ಕರೆ ದೂರವಾಣಿ ಸಂಖ್ಯೆಯಲ್ಲಿ ದೂರು ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಆದ್ದರಿಂದ, ಮೊಬೈಲ್ ಫೋನ್ಗಳ ತಯಾರಿಕೆ ಸಂದರ್ಭದಲ್ಲಿಯೇ ಪ್ಯಾನಿಕ್ ಬಟನ್ ಅಳವಡಿಸಲು ನಿರ್ದೇಶನ ನೀಡಬೇಕು‘ ಎಂದು ಕೋರಿ ಬೆಂಗಳೂರಿನ ನಾಗದೇವನಹಳ್ಳಿಯ ಎನ್.ಟಿ.ಅರುಣ್ ಕುಮಾರ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಈ ಕುರಿತಂತೆ ನೀಡಿದ ಸ್ಪಷ್ಟನೆಯನ್ನು ಮಾನ್ಯ ಮಾಡಿದ ನ್ಯಾಯಪೀಠ, ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ಸುರಕ್ಷಾ ಮೊಬೈಲ್ ಆ್ಯಪ್ ಪರಿಚಯಿಸಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅರ್ಜಿ ವಿಲೇವಾರಿ ಮಾಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.