ಬೆಂಗಳೂರು: ‘ದೀರ್ಘ ಅವಧಿಯ ಬಳಿಕ ರಾಜ್ಯದ ಶಾಲೆಗಳಲ್ಲಿ ಮತ್ತೊಮ್ಮೆ ಮಕ್ಕಳ ಕಲರವ ಆರಂಭವಾಗುತ್ತಿರುವುದು ತುಂಬಾ ಸಂತಸ ತಂದಿದೆ. ಮಕ್ಕಳ ಬಾಲ್ಯ ಕಳೆದು ಹೋಗದಂತೆ ಕಾಯುವ ನಿಟ್ಟಿನಲ್ಲಿ ನಮ್ಮ ಸರ್ಕಾರ ತೆಗೆದುಕೊಂಡಿರುವ ನಿಲುವು ಸ್ವಾಗತಾರ್ಹ’ ಎಂದು ಮಾಜಿ ಪ್ರಾಥಮಿಕ ಮತ್ತು ಪ್ರೌಠ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ‘ಶಾಲೆಯೆಂಬ ದೇವಸ್ಥಾನ ನಮ್ಮ ಸಮಾಜಕ್ಕೆ ಒಳಿತು ಮಾಡಲಿ. ನಮ್ಮ ಮಕ್ಕಳ ಬಾಲ್ಯ ತನ್ನೆಲ್ಲ ಸಂಭ್ರಮದೊಂದಿಗೆ ಮರುಕಳಿಸಲಿ’ ಎಂದು ಹಾರೈಸಿದ್ದಾರೆ.
‘ಶಾಲೆಗೆ ಬರಲು ಉತ್ಸುಕರಾಗಿರುವ ಮಕ್ಕಳಿಗೆಲ್ಲ ಶುಭಾಶಯಗಳು. ಧೈರ್ಯದಿಂದ ಬನ್ನಿ, ಆನಂದದಿಂದ ಕಲಿಯಿರಿ, ಗೆಳೆಯರೊಂದಿಗೆ ಲವಲವಿಕೆಯಿಂದಿರಿ. ನಿಮ್ಮ ಶಾಲೆ, ಶಿಕ್ಷಕರು ನಿಮಗಾಗಿ ಎದುರು ನೋಡುತ್ತಿದ್ದಾರೆ’ ಎಂದಿದ್ದಾರೆ.
‘ಕಳೆದ ಒಂದೂವರೆ ವರ್ಷದಲ್ಲಿ ನಾವು ಮಕ್ಕಳ ಕಲಿಕೆಗೆ ತೊಂದರೆ ಆಗಬಾರದು ಎನ್ನುವ ಸದಾಶಯದೊಂದಿಗೆ ಹಲವು ವಿಶಿಷ್ಟ ಬೋಧನಾ ಕ್ರಮಗಳಿಗೆ ಮುಂದಾಗಿದ್ದೆವು. ಜನವರಿಯಲ್ಲಿ ಶಾಲಾರಂಭದ ಪ್ರಯತ್ನ ಕೂಡಾ ಮಾಡಿ, ವಿದ್ಯಾಗಮದಂಥ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಸಂವೇದಾ, ಆಡುತ್ತ ಕಲಿಯೋಣದಂಥ ಹಲವು ಪರ್ಯಾಯ ಕಲಿಕಾ ಕಾರ್ಯಕ್ರಮಗಳಿಗೆ ಸಹ ಚಾಲನೆ ಕೊಟ್ಟಿದ್ದೆವು’ ಎಂದು ತಿಳಿಸಿದ್ದಾರೆ.
‘ವಿದ್ಯಾಗಮದ ಸಂದರ್ಭದಲ್ಲಿ, ಕಳೆದ ಬಾರಿ ಶಾಲೆಗಳನ್ನು ಪ್ರಾರಂಭಿಸಿದಾಗ ನಾನು ಅಸಂಖ್ಯ ಮಕ್ಕಳನ್ನು, ಪೋಷಕರನ್ನು ಖುದ್ದಾಗಿ ಭೇಟಿ ಮಾಡಿ ಅವರ ಸಂತಸವನ್ನು ಅರಿತಿದ್ದೆ. ಕಳೆದ ತಿಂಗಳು, ಈ ಆಗಸ್ಟ್ 3ನೆಯ ವಾರದಿಂದ ಶಾಲೆಗಳನ್ನು ಆರಂಭಿಸುವ ಇಂಗಿತ ವ್ಯಕ್ತಪಡಿಸಿದ್ದೆವು. ತರಗತಿ ಕಲಿಕೆಗೆ ಬೇರಾವುದೇ ಪರ್ಯಾಯ ಇಲ್ಲ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ, ಸಮಾಜದ ಹಿತಕ್ಕೆ ಶಾಲಾ ಕಲಿಕೆಯಷ್ಟೇ ಪೂರಕ ಎನ್ನುವುದು ನನಗೆ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರ ತೆಗೆದುಕೊಂಡ ನಿಲುವು ಪೂರಕವಾಗಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.