ವಿಧಾನಸೌಧ
ಬೆಂಗಳೂರು: ‘ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಬೇಕು. ಮಾಹಿತಿ ಗೋಪ್ಯವಾಗಿಡಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ, ರಾಜ್ಯ ಒಕ್ಕಲಿಗರ ಸಂಘ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿವೆ.
‘ಸಮೀಕ್ಷೆಯ ದತ್ತಾಂಶವನ್ನು ಸರ್ಕಾರ ಸೇರಿ ಯಾರಿಗೂ ಬಹಿರಂಗಪಡಿಸಬಾರದು. ಜನರು ಸ್ವಯಂಪ್ರೇರಣೆಯಿಂದ ನೀಡಿದ ಮಾಹಿತಿಗಳನ್ನಷ್ಟೇ ಪಡೆಯಬೇಕು. ಮಾಹಿತಿಗಾಗಿ ಒತ್ತಡ ಹಾಕಬಾರದು. ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಈ ಎಲ್ಲ ಷರತ್ತುಗಳಿಗೆ ಬದ್ಧವಾಗಿರುವ ಬಗ್ಗೆ ಆಯೋಗವು ಅಫಿಡವಿಟ್ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಅದರಂತೆ ಆಯೋಗ ನಡೆದುಕೊಳ್ಳಬೇಕು’ ಎಂದು ಸಂಘಟನೆಗಳ ಪ್ರಮುಖರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈಗಿನ ಆಯೋಗದ ಚಟುವಟಿಕೆಯು ಕಾಂತರಾಜ ಆಯೋಗಕ್ಕಿಂತ ಬಹಳ ಕೆಳಮಟ್ಟದಲ್ಲಿದೆ. ಜನರು, ಸಂಘಟನೆಗಳ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ. ಸಮಸ್ಯೆ, ಗೊಂದಲ ಉಂಟಾದಾಗ ಆಯೋಗ ಪ್ರತಿಕ್ರಿಯಿಸುತ್ತಿಲ್ಲ. ಬದಲಾಗಿ ಸರ್ಕಾರವೇ ಪ್ರತಿಕ್ರಿಯೆ ನೀಡುತ್ತಿದೆ. ಆಯೋಗವು ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಅನುಮಾನ ಕಾಡುತ್ತಿದೆ’ ಎಂದು ಸಂಶಯ ವ್ಯಕ್ತಪಡಿಸಿದರು.
‘ಕಾಂತರಾಜ ಆಯೋಗವು ಸಮೀಕ್ಷೆಗೆ 65 ದಿನ ತೆಗೆದುಕೊಂಡಿತ್ತು. ಒಳಮೀಸಲಾತಿಗಾಗಿ ಒಂದು ಕೋಟಿ ಜನರ ಸಮೀಕ್ಷೆಗೆ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವು 45 ದಿನ ತೆಗೆದುಕೊಂಡಿತ್ತು. ಈ ಸಮೀಕ್ಷೆ ಕೇವಲ 15 ದಿನ ನಿಗದಿಪಡಿಸಿರುವುದು ಸಾಕಾಗವುದಿಲ್ಲ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ. ರೇಣುಕಪ್ರಸನ್ನ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ನಾಗರಾಜ್ ಯಲಚವಾಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.