ADVERTISEMENT

‘ಶಿಕ್ಷಕರ ಸಮಸ್ಯೆ: ಅಧಿವೇಶನದಲ್ಲಿ ಪ್ರಸ್ತಾಪ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 19:03 IST
Last Updated 17 ಸೆಪ್ಟೆಂಬರ್ 2020, 19:03 IST

ಬೆಂಗಳೂರು: ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿದ ಅತಿಥಿ ಶಿಕ್ಷಕರು,ಉಪನ್ಯಾಸಕರು ಮತ್ತು ಖಾಸಗಿ ಶಾಲಾ–ಕಾಲೇಜುಗಳ ಶಿಕ್ಷಕರ ನಿಯೋಗವು, ಶಿಕ್ಷಕ ಸಮುದಾಯದ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು ಎಂದು ಮನವಿ ಮಾಡಿತು.

ಎಲ್ಲ ಸರ್ಕಾರಿ ಶಾಲಾ–ಕಾಲೇಜುಗಳ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಏಪ್ರಿಲ್, ಮೇ ಮತ್ತು ಜೂನ್‌ ತಿಂಗಳ ವಿಶೇಷ ಆರ್ಥಿಕ ಪ್ಯಾಕೇಜ್‌ ನೀಡಬೇಕು, ಜುಲೈನಿಂದ ಪೂರ್ಣ ವೇತನವನ್ನು ಶಾಲಾ–ಕಾಲೇಜು ಪ್ರಾರಂಭವಾಗುವವರೆಗೆ ನೀಡಬೇಕು ಹಾಗೂ ಉದ್ಯೋಗ ಭದ್ರತೆ ಒದಗಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.

‘ಖಾಸಗಿ ಶಾಲಾ–ಕಾಲೇಜು ಅತಿಥಿ ಶಿಕ್ಷಕರಿಗೂ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು ಮತ್ತು ಕೆಲಸದಿಂದ ತೆಗೆದು ಹಾಕದಂತೆ ಸೂಕ್ತ ಆದೇಶ ಹೊರಡಿಸಲು ಒತ್ತಾಯಿಸಬೇಕು’ ಎಂದು ನಿಯೋಗ ಬೇಡಿಕೆ ಇಟ್ಟಿತು.

ADVERTISEMENT

ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು ಎಂದು ನಿಯೋಗದಲ್ಲಿದ್ದ ರಾಜೇಶ್‌ ಭಟ್‌ ತಿಳಿಸಿದರು.

ಉದ್ಯೋಗ ಭದ್ರತೆಗೆಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರ ಆಗ್ರಹ: ‘ಎಲ್ಲ ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ಖಾತ್ರಿಪಡಿಸುವಂತೆ ಮತ್ತು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಉಪನ್ಯಾಸಕರನ್ನು ಕೆಲಸದಿಂದ ಕೈಬಿಡದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರ ಸಂಘಟನೆ ಮನವಿ ಸಲ್ಲಿಸಿದೆ.

ಸಂಘಟನೆಯ ಅಧ್ಯಕ್ಷ ವಿ.ಎನ್‌. ರಾಜಶೇಖರ್‌ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗ, ಎಲ್ಲ ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರಿಗೆ ಶೇ 100 ವೇತನ, ಕೋವಿಡ್‌ ಕಾರಣ ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್‌, ಕೆಲಸ ಕಳೆದುಕೊಂಡ ಉಪನ್ಯಾಸಕರಿಗೆ ಸರ್ಕಾರ ತಕ್ಷಣ ಮತ್ತೊಂದು ಉದ್ಯೋಗ ಸೃಷ್ಟಿಸುವಂತೆ ಅಧಿವೇಶನದಲ್ಲಿ ಒತ್ತಾಯಿಸಬೇಕು ಎಂದೂ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.