ADVERTISEMENT

ಬೆಂಗಳೂರು: ಶಿಕ್ಷಕರ ಸಂಘಕ್ಕೆ ಚುನಾವಣೆ ನಡೆಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 16:06 IST
Last Updated 4 ಫೆಬ್ರುವರಿ 2026, 16:06 IST
   

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯನ್ನು ನಡೆಸಲು ತಕ್ಷಣವೇ ಪ್ರಕ್ರಿಯೆ ಆರಂಭಿಸಿ ಎಂದು ರಾಜ್ಯ ಸರ್ಕಾರವು ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಸೂಚಿಸಿದೆ.

ಸಂಘದ ಚುನಾವಣಾ ಅವಧಿಯು 2025ರ ಡಿಸೆಂಬರ್‌ 12ಕ್ಕೆ ಕೊನೆಯಾಗಿದೆ. ಹೀಗಾಗಿ ತಕ್ಷಣವೇ ಚುನಾವಣೆ ನಡೆಸಬೇಕಿದೆ. ಅಲ್ಲಿಯವರೆಗೆ ಸಂಘದ ದೈನಂದಿನ ಚಟುವಟಿಕೆಗಳು ಮತ್ತು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ನಿರ್ಣಯವನ್ನು ಮಾತ್ರವೇ ತೆಗೆದುಕೊಳ್ಳಬೇಕು. ಸಂಘಕ್ಕೆ ಸಂಬಂಧಿಸಿದ ಇತರ ಚಟುವಟಿಕೆಗಳು ಹಾಗೂ ಆರ್ಥಿಕ ಹೊರೆ ಆಗಬಹುದಾದಂತಹ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬಾರದು ಎಂದು ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಸೂಚಿಸಿದ್ದಾರೆ.

ಚುನಾವಣಾ ಅವಧಿ ಮುಗಿದಿದ್ದರೂ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರು ಚುನಾವಣೆ ನಡೆಸಲು ಕ್ರಮ ತೆಗದುಕೊಳ್ಳುತ್ತಿಲ್ಲ. ಇದರ ಮಧ್ಯೆಯೇ ಸಂಘದ ಬೈ–ಲಾಗೆ ತಿದ್ದುಪಡಿ ತರುತ್ತಿದ್ದಾರೆ. ಸಂಘದ ಇತರ  ಪದಾಧಿಕಾರಿಗಳಿಗೆ ತಿಳಿಸದೆಯೇ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಸಂಘದ ಖಜಾಂಚಿ ನೇತೃತ್ವದಲ್ಲಿ ಹಲವು ಸದಸ್ಯರು ಜನವರಿ 22ರಂದು ಸಹಕಾರ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ADVERTISEMENT

ಇಲಾಖೆ ಕಾರ್ಯದರ್ಶಿಯು, ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಸಹಕಾರ ಸಂಘಗಳ ನಿಬಂಧಕರಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.