ADVERTISEMENT

ನಾಲ್ವರು ಉಗ್ರರು ಬೆಂಗಳೂರಿಗೆ: ಸುಳ್ಳು ವದಂತಿ

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:38 IST
Last Updated 6 ಮೇ 2019, 19:38 IST

ಬೆಂಗಳೂರು: ‘ಶ್ರೀಲಂಕಾದಲ್ಲಿ ಸರಣಿ ಬಾಂಬ್‌ ಸ್ಫೋಟವಾದ ಬಳಿಕ ನಾಲ್ವರು ಉಗ್ರರು ಬೆಂಗಳೂರಿಗೆ ಬಂದಿದ್ದಾರೆ’ ಎಂಬ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ಹರಿದಾಡಿತು.

ಆ ಬಗ್ಗೆ ಟ್ವೀಟ್‌ ಮಾಡಿದ ಬೆಂಗಳೂರು ಪೊಲೀಸರು, ‘ಇದೊಂದು ಸುಳ್ಳು ವದಂತಿ. ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಈ ಸಂದೇಶವನ್ನು ಶೇರ್ ಮಾಡಬಾರದು’ ಎಂದು ಮನವಿ ಮಾಡಿದರು.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ರಾಜಧಾನಿ ಸುರಕ್ಷಿತವಾಗಿದೆ. ಯಾರೋ ಕಿಡಿಗೇಡಿಗಳು ಈ ರೀತಿ ಸುಳ್ಳು ವದಂತಿ ಹರಡಿ, ಜನರಲ್ಲಿ ಭಯ ಹುಟ್ಟಿಸಲು ಯತ್ನಿಸಿದ್ದಾರೆ. ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಸಂದೇಶದಲ್ಲಿ ಏನಿತ್ತು: ಬಾಂಬ್ ಸ್ಫೋಟದ ಬಳಿಕ ಶ್ರೀಲಂಕಾ ಬಿಡುಗಡೆ ಮಾಡಿದ್ದ ಶಂಕಿತ ಉಗ್ರರ ಫೋಟೊ ಸಮೇತ, ‘ಬೆಂಗಳೂರಿಗೆ ಉಗ್ರರು ಬಂದಿದ್ದಾರೆ’ ಎಂಬ ಸಂದೇಶವನ್ನು ಹರಿಬಿಡಲಾಗಿತ್ತು.

‘ಬೆಂಗಳೂರಿಗೆ ಬಂದಿರುವ ನಾಲ್ವರು ಉಗ್ರರು, 15 ದಿನದೊಳಗೆ ಅಪಾಯಕಾರಿ ಕೆಲಸ ಮಾಡಲಿದ್ದಾರೆ. ವೈಟ್‍ಫೀಲ್ಡ್, ಬೆಳ್ಳಂದೂರು ಪ್ರದೇಶದಲ್ಲಿರುವ ಐ.ಟಿ ಕಂಪನಿಗಳ ಮೇಲೆ ದಾಳಿ ಮಾಡಲಿದ್ದಾರೆ. ಈ ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು. ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಈ ಫೋಟೊದಲ್ಲಿರುವ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಸಂದೇಶದಲ್ಲಿ ಬರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.