ದಾವಣಗೆರೆ: ಮಾರಣಾಂತಿಕ ತಲಸೇಮಿಯಾ ರೋಗದಿಂದ ಬಳಲುತ್ತಿದ್ದ ನಗರದ ಐದು ವರ್ಷದ ಬಾಲಕ ಹೇಮಂತ್ ಅಸ್ಥಿಮಜ್ಜೆ ಕಸಿ ಶಸ್ತ್ರಚಿಕಿತ್ಸೆಯಿಂದಾಗಿ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದು ಬೆಂಗಳೂರಿನ ಮಜುಂದಾರ್ ಷಾ ವೈದ್ಯಕೀಯ ಕೇಂದ್ರ, ನಾರಾಯಣ ಹೆಲ್ತ್ಸಿಟಿ ನಿರ್ದೇಶಕ ಡಾ. ಸುನೀಲ್ ಭಟ್ ತಿಳಿಸಿದರು.
‘ತಲಸೇಮಿಯಾ ರೋಗಿಗಳಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆ ಕಡಿಮೆ ಇರುತ್ತದೆ. ಹೀಗಾಗಿ ರೋಗಿಗೆ ಪ್ರತಿ ತಿಂಗಳು ರಕ್ತ ಮರುಪೂರಣ ಮಾಡಿಸಬೇಕು. ಈ ರೋಗ ಗುಣಪಡಿಸಲು ಇರುವ ಒಂದೇ ದಾರಿ ಅಸ್ಥಿಮಜ್ಜೆ ಕಸಿ. ಈ ವಿಧಾನದ ಮೂಲಕ ಹೇಮಂತ್ ಗುಣಮುಖನಾಗಿದ್ದಾನೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಬಾಲಕನ ತಾಯಿ ಕವಿತಾ, ‘10 ತಿಂಗಳು ಇದ್ದಾಗ ತಲಸೇಮಿಯಾ ರೋಗ ಇದೆ ಎಂದು ತಿಳಿಯಿತು. ಪ್ರತಿ ತಿಂಗಳು ಬಾಪೂಜಿ ಆಸ್ಪತ್ರೆಯಲ್ಲಿ ರಕ್ತ ಮರುಪೂರಣ ಮಾಡಿಸುತ್ತಿದ್ದೆವು. ಆಗ ಅಸ್ಥಿಮಜ್ಜೆ ಕಸಿ ಬಗ್ಗೆ ಡಾ. ಸುನೀಲ್ ಭಟ್ ಮಾಹಿತಿ ನೀಡಿದರು. ಮಗಳು ನಮ್ರತಾಳ ಅಸ್ಥಿಮಜ್ಜೆ ಹೊಂದಾಣಿಕೆಯಾಯಿತು. ಡಾಕ್ಟರ್ ಸಲಹೆಯಂತೆ ಅಸ್ಥಿಮಜ್ಜೆ ಕಸಿ ಮಾಡಿಸಿದೆವು. ಚಿಕಿತ್ಸೆಗೆ ₹ 10 ಲಕ್ಷ ವೆಚ್ಚವಾಯಿತು. ಈಗ ಹೇಮಂತ್ ಲವಲವಿಕೆಯಿಂದ ಇದ್ದಾನೆ’ ಎಂದು ಹರ್ಷ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.