ಎಚ್.ಡಿ.ಕೋಟೆ: ತಂದೆ–ತಾಯಿಯನ್ನು ಕಳೆದುಕೊಂಡ ಆ ಬಾಲಕ, ಪಾರ್ಶ್ವವಾಯು ಪೀಡಿತ ತನ್ನ ಅಕ್ಕನ ಆರೈಕೆಗಾಗಿ ಶಾಲೆಯನ್ನೇ ತೊರೆದಿದ್ದಾನೆ. ಎಲ್ಲ ಮಕ್ಕಳಂತೆ ಶಾಲೆಯ ಅಂಗಳದಲ್ಲಿ ಆಟವಾಡುತ್ತಾ ಕಲಿಯಬೇಕಿದ್ದ ಆತ, ಇಂದು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ.
ತಾಲ್ಲೂಕಿನ ಆಲನಹಳ್ಳಿ ಗ್ರಾಮದ ಮಂಜುಳಾ ಮತ್ತು ಕುಮಾರ್ ದಂಪತಿ ಪುತ್ರ ಆಕಾಶ್ (15), ತನ್ನ ಅಕ್ಕ ಅನುಷಾಳ (17) ಆರೈಕೆಯಲ್ಲಿ ತೊಡಗಿರುವ ಬಾಲಕ.
ಗ್ರಾಮದ ಸಮೀಪದಲ್ಲಿರುವ ಟಿ.ಎಸ್. ಸಾರ್ವಜನಿಕ ಪ್ರೌಢಶಾಲೆಯಲ್ಲಿಆಕಾಶ್ 8ನೇ ತರಗತಿಯಲ್ಲಿ ಓದು
ತ್ತಿದ್ದ. ಅನಾರೋಗ್ಯದಿಂದ ತಂದೆತೀರಿಕೊಂಡರು. ಅದಾದ ಎರಡುತಿಂಗಳಲ್ಲೇ ತಾಯಿಯೂ ಅಸು
ನೀಗಿದರು. ಸಂಬಂಧಿಕರಾರೂ ಇವರ ನೆರವಿಗೆ ಬರಲಿಲ್ಲ. ಅಕ್ಕನ ಆರೈಕೆ ಆಗಬೇಕು; ಮನೆಯೂ ನಡೆಯಬೇಕು. ಆದರೆ ಹೇಗೆ? ಬೇರೆ ದಾರಿ ಕಾಣದೇ ಶಾಲೆ ಬಿಟ್ಟ ಆಕಾಶ್, ಕೂಲಿಗೆ ಹೊರಟ.
ಅನುಷಾ ಕೈ, ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ನಿತ್ಯ ಕರ್ಮ ಪೂರೈಸಲೂ ಎದ್ದು ಹೋಗಲಾದ ಸ್ಥಿತಿ
ಯಲ್ಲಿದ್ದಾಳೆ. ಆಕೆಗೆ ಸ್ನಾನ ಮಾಡಿಸುವುದು, ಊಟ ಮಾಡಿಸುವುದು, ಬಟ್ಟೆ ಬದಲಿಸುವುದು ಹೀಗೆ... ಎಲ್ಲ ಕೆಲಸಗಳನ್ನೂ ತಮ್ಮನೇ ಮಾಡುತ್ತಿದ್ದಾನೆ. ಅವಳನ್ನು ಮನೆಯಲ್ಲಿ ಬಿಟ್ಟು, ಕೂಲಿ ಕೆಲಸಕ್ಕೆ ಹೋಗುತ್ತಾನೆ. ಸಂಜೆ ಮರಳಿದ ಬಳಿಕ ಅಡುಗೆ ಮಾಡಿ ಅಕ್ಕನಿಗೆ ಬಡಿಸಿ, ತಾನೂ ಊಟ ಮಾಡುತ್ತಾನೆ.
‘ಶಾಲೆಯಲ್ಲಿ ಸ್ನೇಹಿತರು ನನ್ನ ಜತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಸಂಬಂಧಿಕರು ದೂರವಾದರು’ ಎನ್ನುವಾಗ ಆಕಾಶ್ ಕಣ್ಣಾಲಿಗಳು ತುಂಬಿ ಬಂದವು.
ಈ ಮಕ್ಕಳ ಸ್ಥಿತಿಯನ್ನು ತಿಳಿದ ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ ಹಾಗೂ ಅವರ ಸ್ನೇಹಿತರು ₹5 ಸಾವಿರ ಹಾಗೂ ದಿನಸಿ ಪದಾರ್ಥಗಳನ್ನು ಒದಗಿಸಿದ್ದಾರೆ. ‘ಆಕಾಶ್ಗೆ ಸರ್ಕಾರ ಆರ್ಥಿಕ ನೆರವು ಹಾಗೂ ಆರೋಗ್ಯ ಸೌಲಭ್ಯ ಒದಗಿಸಬೇಕು’ ಎಂದು ಗ್ರಾಮದ ಆನಂದ ಆಗ್ರಹಿಸಿದರು.
ಅನಾಥ ಮಕ್ಕಳಿಗೆ ನೆರವು ನೀಡಲು ಸಿದ್ಧರಿದ್ದೇವೆ. ಬಾಲಕ ಶಿಕ್ಷಣ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು
-ಎಂ.ರೇವಣ್ಣ,ಕ್ಷೇತ್ರ ಶಿಕ್ಷಣಾಧಿಕಾರಿ
ಅನುಷಾಳ ಆರೋಗ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ಅಗತ್ಯ ಚಿಕಿತ್ಸೆ ನೀಡಲಾಗುವುದು
ಟಿ.ರವಿ, ತಾಲ್ಲೂಕು ಆರೋಗ್ಯಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.