ಬೆಂಗಳೂರು: ಭಾರತವು 1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ ಯುದ್ಧದಲ್ಲಿ ಗೆಲುವು ಸಾಧಿಸಿತ್ತು. ಇದರ 50ನೇ ವರ್ಷಾಚರಣೆಯ ಆರಂಭದ ಅಂಗವಾಗಿ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಿಸಿದ್ದ ‘ವಿಜಯ ಜ್ಯೋತಿ’ ಶನಿವಾರ ಬೆಳಿಗ್ಗೆ ಉದ್ಯಾನ ನಗರಿಯನ್ನು ತಲುಪಿತು.
ದೇಶದ ವಿವಿಧ ಪ್ರದೇಶಗಳನ್ನು ಹಾದು ಬಂದಿರುವ ಈ ಜ್ಯೋತಿಯನ್ನು ಮದ್ರಾಸ್ ಎಂಜಿನಿಯರ್ ಗ್ರೂಪ್ ಆ್ಯಂಡ್ ಸೆಂಟರ್ನ (ಎಂಇಜಿ) ಯೋಧರು ಆದರದಿಂದ ಬರಮಾಡಿಕೊಂಡರು. ಬಳಿಕ ಅದನ್ನು ಹಳೆಯ ಮದ್ರಾಸ್ ರಸ್ತೆಯ ಮೂಲಕ ಎಂಇಜಿ ಕೇಂದ್ರಕ್ಕೆ ಒಯ್ಯಲಾಯಿತು. ಕರ್ನಾಟಕ ಮತ್ತು ಕೇರಳ ಉಪವಲಯದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಮೇಜರ್ ಜನರಲ್ ಜೆ.ವಿ.ಪ್ರಸಾದ್ ಜ್ಯೋತಿಯನ್ನು ಸ್ವೀಕರಿಸಿದರು. ಈ ವೇಳೆ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಲಾಯಿತು.
‘ವಿಜಯ ಜ್ಯೋತಿ’ಯು ಮಾರ್ಚ್ 5ರವರೆಗೆ ಬೆಂಗಳೂರಿನಲ್ಲಿ ಇರಲಿದೆ. 1971ರ ಯುದ್ಧದಲ್ಲಿ ಹುತಾತ್ಮರಾದ ಯೋಧರ ಹಳ್ಳಿಗಳಿಗೆ ಇದನ್ನು ಕೊಂಡೊಯ್ಯಲಾಗುತ್ತದೆ. ಮಾರ್ಚ್ 6ರಂದು ಇದು ಕೊಯಂಬತ್ತೂರಿನತ್ತ ಸಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.