ADVERTISEMENT

ಪದಚ್ಯುತಿಗೆ ಅಧಿಕಾರವಿಲ್ಲ: ಕೋಡಿಹಳ್ಳಿ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 31 ಮೇ 2022, 20:06 IST
Last Updated 31 ಮೇ 2022, 20:06 IST
ಕೋಡಿಹಳ್ಳಿ ಚಂದ್ರಶೇಖರ
ಕೋಡಿಹಳ್ಳಿ ಚಂದ್ರಶೇಖರ   

ಬೆಂಗಳೂರು: ‘ಶಿವಮೊಗ್ಗದಲ್ಲಿ ಸಭೆ ನಡೆಸಿದವರಿಗೂ ನಮ್ಮ ರೈತ ಸಂಘಕ್ಕೂ ಸಂಬಂಧವೇ ಇಲ್ಲ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ಅಧಿಕಾರ ಅವರಿಗೆ ಇಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶಿವಮೊಗ್ಗದಲ್ಲಿ ಸಭೆ ನಡೆದಿರುವುದು ಸಾಮೂಹಿಕ ನಾಯಕತ್ವದ ರೈತ ಸಂಘದ್ದು. ನಮ್ಮ ಸಂಘಟನೆಯ ನಾಯಕರು ಅವರಲ್ಲ. ನನ್ನನ್ನು ಉಚ್ಛಾಟನೆ ಮಾಡಲು ಅವರು ಯಾರು’ ಎಂದು ಪ್ರಶ್ನಿಸಿದರು.

‘ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರು ಕಟ್ಟಿದ ರೈತ ಸಂಘದ ಅಧ್ಯಕ್ಷನಾಗಿ ನಾನು ಕೆಲಸ ಮಾಡುತ್ತಿ
ದ್ದೇನೆ. ಎಲ್ಲಮ ಪದಾಧಿಕಾರಿಗಳು ಮತ್ತು ರೈತರ ಬೆಂಬಲ ನನಗಿದೆ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಅಧಿಕಾರ ಇರುವುದು ರೈತರಿಗೆ ಮಾತ್ರ. ನಾನೇ ರೈತ ಸಂಘದ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ. ಚೋಣಪ್ಪ ಪೂಜಾರಿ ಅಧ್ಯಕ್ಷರಾಗಿದ್ದ ಸಾಮೂಹಿಕ ನಾಯಕತ್ವದ ರೈತ ಸಂಘಕ್ಕೆ ಎಚ್‌.ಆರ್‌. ಬಸವರಾಜ‍ಪ್ಪ ಅಧ್ಯಕ್ಷರಾಗಬಹುದು’ ಎಂದರು.

ADVERTISEMENT

‘ನಾನು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಅಧಿಕಾರ ದುರ್ಬಳಕೆ ಸಾಬೀತುಪಡಿಸಿದರೆ ಚಳವಳಿಗಳಲ್ಲಿ ಭಾಗವಹಿಸುವುದಿಲ್ಲ. ಹಸಿರು ಟವೆಲ್ ಧರಿಸುವುದಿಲ್ಲ. ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕರಲ್ಲಿ ನಾನು ಒಬ್ಬನಾಗಿದ್ದೇನೆ. ಆರೋಪ ಮಾಡಿದ ತಕ್ಷಣ ಅಪರಾಧಿಯಾಗುವುದಿಲ್ಲ. ಆರೋಪದ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.