ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಶ್ರೀ ಮಂಜುನಾಥ ಸ್ವಾಮಿ ಲಕ್ಷ ದೀಪೋತ್ಸವ ನಡೆಯಿತು.
ದೇವಸ್ಥಾನದ ಒಳಗಡೆ ದೇವರ ಮೂರ್ತಿಯನ್ನು ಹೊತ್ತು ಗರ್ಭಗುಡಿಗೆ ಎರಡು ಸುತ್ತು ಹಾಗೂ ಹೊರಗೆ ನಾಲ್ಕು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಕ್ಷೇತ್ರಪಾಲ ಪೂಜೆ ನಡೆಯಿತು.
ನಂತರ ಗರ್ಭಗುಡಿ ಒಳಗೆ ಒಂದು ಸುತ್ತು ಪ್ರದಕ್ಷಿಣೆ ಬಂದು ಹೊರಗಿನ ಪ್ರಾಂಗಣದಲ್ಲಿ ಶಂಖ, ಕೊಳಲು, ಚೆಂಡೆ ವಾದನ, ನಾಗಸ್ವರ ಇತ್ಯಾದಿ ಸಂಗೀತ ಸೇವೆಯೊದಿಗೆ ಒಂಬತ್ತು ಸುತ್ತು ಪ್ರದಕ್ಷಿಣೆ ನಡೆಯಿತು.
ಬಳಿಕ ಬೆಳ್ಳಿ ರಥದಲ್ಲಿ ಶ್ರೀ ಸ್ವಾಮಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಗೌರಿಮಾರು ಕಟ್ಟೆಗೆ ಕೊಂಡುಹೋಗಿ ಅಲ್ಲಿ ಅಷ್ಟಾವಧಾನ ಪೂಜೆ ನಡೆಯಿತು. ನಂತರ ಭವ್ಯ ಮೆರವಣಿಗೆಯಲ್ಲಿ ದೇವರ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಯಿತು. ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಮಂದಿ ಭಕ್ತಾದಿಗಳು ದೀಪೋತ್ಸವ ವೀಕ್ಷಿಸಿ ಧನ್ಯತೆಯನ್ನು ಹೊಂದಿದರು. 648 ಕಲಾ ತಂಡಗಳ 3,200 ಮಂದಿ ಕಲಾವಿದರು ವಾಲಗ, ಶಂಖ, ತಾಳ, ಜಾಗಟೆ, ಚೆಂಡೆ ವಾದನದ ಮೂಲಕ ಕಲಾ ಸೇವೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.