ADVERTISEMENT

ನಕಲಿ ಖಾತೆಗೆ ಹಣ ಪಾವತಿಸಿದ ಆರೋಪ: ಕೃಷಿ ಇಲಾಖೆಯ ಮೂವರು ಸಿಬ್ಬಂದಿ ಅಮಾನತು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 20:45 IST
Last Updated 24 ಡಿಸೆಂಬರ್ 2020, 20:45 IST

ಹೂವಿನಹಡಗಲಿ: ಹನಿ ನೀರಾವರಿ ಯೋಜನೆಗೆ ಸಂಬಂಧಿಸಿದ ಹಣ ದುರುಪಯೋಗ ಮತ್ತು ಕರ್ತವ್ಯ ಚ್ಯುತಿ ಆರೋಪದ ಮೇಲೆ ಇಲ್ಲಿನ ಕೃಷಿ ಇಲಾಖೆಯ ಮೂವರು ಸಿಬ್ಬಂದಿಯನ್ನು ಇಲಾಖೆಯ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ತಾಂತ್ರಿಕ ಅಧಿಕಾರಿ ಶಿವಮೂರ್ತಿ ನಾಯ್ಕ, ಕಚೇರಿ ಅಧೀಕ್ಷಕ ರಮೇಶ ಅಕ್ಕಿ, ಎಫ್.ಡಿ.ಎ. ಆರ್.ಲೋಹಿತ್ ನಾಯ್ಕ ಅಮಾನತುಗೊಂಡವರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ ಅಮಾನತುಗೊಂಡಿದ್ದರು.

‘ಬೆಂಗಳೂರಿನ ಮೇಘ ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಲ್ಲಿ ನಕಲಿ ರೆಸಿಪಿಯೆಂಟ್ ಐಡಿ ಸೃಷ್ಟಿಸಿ ₹15.46 ಲಕ್ಷ ಮೊತ್ತವನ್ನು ಅಂಗೀಕೃತವಲ್ಲದ ಕಂಪನಿಗೆ ಪಾವತಿಸಲಾಗಿದೆ. ಜಿಎಸ್‌ಟಿ ಹಾಕದೆ ಪೂರ್ಣ ಮೊತ್ತವನ್ನು ಖಾತೆಗೆ ವರ್ಗಾಯಿಸಲಾಗಿದೆ. ಈ ಹಂತದಲ್ಲಿ ನಕಲಿ ದಾಖಲೆಗಳನ್ನು ಪರಿಶೀಲಿಸದೇ ಬಿಲ್‌ಗಳನ್ನು ಪಾಸ್ ಮಾಡಿ ಮೂವರು ಸಿಬ್ಬಂದಿ ಕರ್ತವ್ಯ ಚ್ಯುತಿ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಕೃಷಿ ಆಯುಕ್ತರು ಅಮಾನತು ಆದೇಶದಲ್ಲಿ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.