ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಭಾಗದ ಬರ್ಚಿ ಅರಣ್ಯ ವಲಯದಲ್ಲಿ ತಲೆ, ಹಾಗೂ ಕಾಲುಗಳ ಕತ್ತರಿಸಿದ ಸ್ಥಿತಿಯಲ್ಲಿ ಗಂಡು ಹುಲಿಯೊಂದರ ಕಳೇಬರಹ ಭಾನುವಾರ ಪತ್ತೆಯಾಗಿದೆ.
‘ನಾನಾಕೇಸರೊಡ್ಲಾ ಗ್ರಾಮದ ಬಳಿ ಹುಲಿಯ ಕಳೇಬರಹ ಪತ್ತೆಯಾಗಿದ್ದು, ಸುಮಾರು 3ರಿಂದ 4 ದಿನಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆ. ಹುಲಿ ಅಥವಾ ಇತರ ಪ್ರಾಣಿಯೊಂದಿಗಿನ ಕಾದಾಟದಲ್ಲಿ ಮೃತಪಟ್ಟಿರಬಹುದು ಎಂದು ಪಶು ವೈದ್ಯಾಧಿಕಾರಿಗಳು ಪರಿಶೀಲಿಸಿ ದೃಢಪಡಿಸಿದ್ದಾರೆ. ಆದರೆ ಕಿಡಿಗೇಡಿಗಳು ಮೃತ ಹುಲಿಯ ತಲೆ ಹಾಗೂ ನಾಲ್ಕು ಕಾಲುಗಳನ್ನು ಕತ್ತರಿಸಿದ್ದಾರೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನ ಹಾಗೂ ವನ್ಯಜೀವಿ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಹುಲಿಯ ಮರೋಣತ್ತರ ಪರೀಕ್ಷೆ ನಡೆಸಲಾಗಿದೆ. ಜೆಎಂಎಫ್ಸಿ ನ್ಯಾಯಾಲಯದ ಆದೇಶದಂತೆ ಹುಲಿ ದೇಹವನ್ನು ವಿಲೀನಗೊಳಿಸಲಾಯಿತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ವಲಯ ಅರಣ್ಯಾಧಿಕಾರಿ ಬಾಲಚಂದ್ರ ತಿಳಿಸಿದರು.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.