ನವದೆಹಲಿ: ಮಹಾತ್ಮ ಗಾಂಧಿ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಅವರು ನೀಡಿದ್ದಾರೆನ್ನಲಾದ ಹೇಳಿಕೆಯ ಬಗ್ಗೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಘೋಷಣೆ ಕೂಗುತ್ತಿರುವಂತೆಯೇ, ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಹೇಳಿಕೆಯನ್ನು ಗುರುವಾರ ಲೋಕಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, "ರಾಷ್ಟ್ರಪಿತ ನಮ್ಮ ಪ್ರಾಣ" ಎಂದರು.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ವೇಳೆಪ್ರಧಾನಿ ಮಾತಿಗೆ ನಿಂತಾಗ ವಿರೋಧ ಪಕ್ಷಗಳು 'ಮಹಾತ್ಮ ಗಾಂಧಿ ಅಮರರಾಗಲಿ' ಎಂದು ಘೋಷಣೆ ಕೂಗತೊಡಗಿದವು. "ಇಷ್ಟೆಯೋ ಅಥವಾ ಇನ್ನೂ ಇದೆಯೇ?" ಎಂದು ಮೋದಿ ಕೇಳಿದಾಗ, ಚೌಧುರಿ ಎದ್ದು ನಿಂತು, "ಇದು ಇನ್ನೂ ಟ್ರೇಲರ್ ಅಷ್ಟೇ" ಎಂದರು.
ಆಗ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, "ನಿಮಗೆ ಮಹಾತ್ಮ ಗಾಂಧಿ ಟ್ರೇಲರ್ ಆಗಿರಬಹುದು. ಆದರೆ ನಮಗೆ ಗಾಂಧೀಜಿಯೇ ಪ್ರಾಣ" ಎಂದುತ್ತರಿಸಿದರು.
ಸಂಸದ ಅನಂತಕುಮಾರಹೆಗಡೆ ಅವರು ಗಾಂಧೀಜಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ವಿಧಾನವನ್ನು ಟೀಕಿಸಿದ್ದರು. ಈ ಬಗ್ಗೆ ವಿರೋಧ ಪಕ್ಷಗಳು ತೀವ್ರವಾಗಿ ಟೀಕೆ ಮಾಡಿದ್ದವು. ಆದರೆ, ತಾನು ಗಾಂಧೀಜಿ ವಿರುದ್ಧ ಏನನ್ನೂ ಮಾತನಾಡಿಲ್ಲ ಎಂದೂ ಹೆಗಡೆ ಬಳಿಕ ಸಮರ್ಥಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.