ಕುಂದಾಪುರ: ಪತಿ ತ್ರಿವಳಿ ತಲಾಖ್ ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕುಂದಾಪುರದ ಆಲ್ಫಿಯಾ ಅಕ್ತರ್ ಎಂಬುವರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ತ್ರಿವಳಿ ತಲಾಖ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕಾನೂನು ನಿಯಮಾವಳಿಯಂತೆ ಉಡುಪಿ ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ.
ಜುಲೈ 7ರಂದು ಹನೀಫ್ ಜತೆ ಕುಂದಾಪುರದ ಮೂಡುಗೋಪಾಡಿಯ ಮಸೀದಿಯಲ್ಲಿ ಮದುವೆ ನಡೆದಿತ್ತು. ಮದುವೆಗೂ ಮುನ್ನ ₹ 5 ಲಕ್ಷ ವರದಕ್ಷಿಣೆಗೆ ಪತಿಯ ಮನೆಯವರು ಬೇಡಿಕೆ ಇಟ್ಟಿದ್ದರು. ₹ 2 ಲಕ್ಷ ಹೊಂದಿಸಿ ಕೊಡಲಾಗಿತ್ತು. ಮದುವೆಯಾದ ಬಳಿಕ ವರದಕ್ಷಿಣೆ ಕಡಿಮೆಯಾಯಿತು ಎಂದು ಪತಿ ಹಾಗೂ ಆತನ ಸಂಬಂಧಿಕರು ಕಿರುಕುಳ ನೀಡುತ್ತಿದ್ದರು.
ಆ.15ರಂದು ಪತಿ ಮೂರು ಬಾರಿ ತಲಾಖ್ ಹೇಳಿ, ಜೀವ ಬೆದರಿಕೆ ಹಾಕಿ ತವರು ಮನೆಗೆ ಕಳಿಸಿದ್ದಾರೆ ಎಂದು ಆಲ್ಫಿಯಾ ಅಕ್ತರ್ ದೂರಿನಲ್ಲಿ ತಿಳಿಸಿದ್ದಾರೆ.
ಪತಿ ‘ತಲಾಖ್ ನೀಡಿದ್ದೇನೆ’ ಎಂದು ತಿಳಿಸಿದ ಬಳಿಕ ಸಂತ್ರಸ್ತ ಮಹಿಳೆ ತನ್ನ ಕುಟುಂಬದ ಸದಸ್ಯರೊಂದಿಗೆ ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಅವರಿಂದ ಕಾನೂನು ಸಲಹೆ ಪಡೆದುಕೊಂಡು 2019ರ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಪತಿ ಹನೀಫ್, ಕುಟುಂಬ ಸದಸ್ಯರಾದ ಸೈಯದ್ ಅಬ್ಬಾಸ್, ಜೈತುನ್ ಹಾಗೂ ಆಯಿಷಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.