ADVERTISEMENT

ತುಮಕೂರು–ಚಿತ್ರದುರ್ಗ ರೈಲು ಮಾರ್ಗ: ಅಂತಿಮ ಹಂತಕ್ಕೆ ಭೂಸ್ವಾಧೀನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 15:52 IST
Last Updated 16 ಏಪ್ರಿಲ್ 2025, 15:52 IST
ರೈಲು ಮಾರ್ಗ
ರೈಲು ಮಾರ್ಗ   

ಬೆಂಗಳೂರು: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಉಳಿಕೆ ಭೂಮಿಯ ಸ್ವಾಧೀನ ಪ್ರಕ್ರಿಯೆಗೆ ₹45 ಕೋಟಿ ನೀಡಲು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ನಾಲ್ಕು ತಿಂಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಸೂಚಿಸಿದರು.

ನೈರುತ್ಯ ರೈಲ್ವೆ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ಬಂದಿದೆ. ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 37 ಎಕರೆ, ತುಮಕೂರು ಜಿಲ್ಲೆಯ ಸರಹದ್ದಿನಲ್ಲಿ 58.3 ಎಕರೆ ಬಾಕಿ ಇದೆ ಎಂದರು.

ಬೆಂಗಳೂರು–ವಿಜಯಪುರ ರೈಲು ಪ್ರಯಾಣದ ಅವಧಿಯನ್ನು ಈಗಿರುವ 14-15 ಗಂಟೆಗಳಿಂದ ಕನಿಷ್ಠ 10 ಗಂಟೆಗಳಿಗೆ ಇಳಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಕೆಲ ರೈಲುಗಳನ್ನಾದರೂ ಹುಬ್ಬಳ್ಳಿ–ಗದಗ ಬೈಪಾಸ್‌ ಮಾರ್ಗದ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಗದಗ-ವಿಜಯಪುರ ನಡುವೆ ದ್ವಿಪಥ ಹಳಿ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದೆ. ವಿದ್ಯುದೀಕರಣ ತ್ವರಿತವಾಗಿ ಪೂರ್ಣಗೊಂಡರೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬಹುದು ಎಂದರು.

ಬೆಂಗಳೂರು-ಮಂಗಳೂರು ಅಡಚಣೆ ನಿವಾರಣೆ:

ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಸಕಲೇಶಪುರ- ಸುಬ್ರಹ್ಮಣ್ಯ ನಡುವೆ ಸಮಸ್ಯೆ ಇದೆ. ಪರ್ಯಾಯ ಮಾರ್ಗ ಅಥವಾ ದ್ವಿಪಥ ಮಾರ್ಗ ನಿರ್ಮಾಣದ ಕುರಿತು ಚಿಂತನೆ ನಡೆದಿದೆ. ಈ ಬಗ್ಗೆ ಸಮೀಕ್ಷೆ ನಡೆಸಲು ಟೆಂಡರ್‌ ಕರೆಯಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.